ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಯೋಜನೆ ಸೇರ್ಪಡೆಗೆ ಒತ್ತಾಯ: ಮುಖ್ಯಮಂತ್ರಿ ಭೇಟಿ ಮಾಡಿದ ಜೀವವೈವಿಧ್ಯ ತಜ್ಞರು

Last Updated 13 ಫೆಬ್ರುವರಿ 2020, 13:47 IST
ಅಕ್ಷರ ಗಾತ್ರ

ಶಿರಸಿ: ಜೀವವೈವಿಧ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತಜ್ಞರ ನಿಯೋಗವು, ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ನವೀನ ಹಸಿರು ಯೋಜನೆಗಳನ್ನು ಬಜೆಟ್‌ನಲ್ಲಿ ಸೇರ್ಪಡೆಗೊಳಿಸಲು ವಿನಂತಿಸಿತು.

ಕರ್ನಾಟಕದ 22 ಪ್ರಮುಖ ನದಿಗಳು, 180 ಉಪನದಿಗಳ ಸಂರಕ್ಷಣೆ ದೃಷ್ಟಿಯಿಂದ ನದಿಮೂಲ ಸಂರಕ್ಷಣಾ ಯೋಜನೆಯ ಕ್ರಿಯಾ ಯೋಜನೆ ರೂಪಿಸಿ, ಬಜೆಟ್‌ನಲ್ಲಿ ಘೋಷಿಸಬೇಕು. ಉತ್ತರ ಕರ್ನಾಟಕ-ಕಲ್ಯಾಣ ಕರ್ನಾಟಕ ಸೇರಿದಂತೆ ಬಯಲು ಸೀಮೆಯಲ್ಲಿ ಫಲವತ್ತಾದ ಭೂ ಪ್ರದೇಶ ಮರುಭೂಮಿ ಆಗುವ ಹಂತ ತಲುಪಿದೆ. ಈ ಪ್ರದೇಶದಲ್ಲಿ ಹಸಿರು ಹೆಚ್ಚಿಸಿದರೆ ಜಲ-ವನ ಸಮೃದ್ಧಿ ಆಗಲಿದೆ.

ಈ ನಿಟ್ಟಿನಲ್ಲಿ ‘ಬಯಲು ಸೀಮೆಯ ವನವಿಕಾಸ ಯೋಜನೆ’ ಹೆಸರಿನ ವಿಶೇಷ ಯೋಜನೆಯನ್ನು ರೂಪಿಸಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ 50ಸಾವಿರ ಹೆಕ್ಟೇರ್ ಸೊಪ್ಪಿನ ಬೆಟ್ಟ ಪ್ರದೇಶವಿದೆ. ರೈತರ ಸಹಭಾಗಿತ್ವದಲ್ಲಿ 5000 ಹೆಕ್ಟೇರ್ ಸೊಪ್ಪಿನ ಬೆಟ್ಟ ಅಭಿವೃದ್ಧಿ ಯೋಜನೆಯನ್ನು ಈ ಬಜೆಟ್‌ನಲ್ಲಿ ಸೇರ್ಪಡೆ ಮಾಡಬೇಕು. ಶಿವಮೊಗ್ಗ ಜಿಲ್ಲೆ ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ದೇವರಕಾಡು-ಕಾನುಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಸಂಬಂಧ 2008ರಿಂದ 2013ರವರೆಗೆ ಜಾರಿಯಲ್ಲಿದ್ದ ಯೋಜನೆಯನ್ನು ಪುನರಾರಂಭಿಸಬೇಕು ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಒತ್ತಾಯಿಸಿದರು.

ಸಮುದ್ರ ಕೊರೆತ ತಡೆಗಟ್ಟಲು ಕರಾವಳಿಯಲ್ಲಿ ಹಸಿರು ಕವಚ ಎಂಬ ವನೀಕರಣ ಯೋಜನೆಯನ್ನು ಪುನಃ ಜಾರಿಗೆ ತರಬೇಕು. ರೈತರ ಸಹಭಾಗಿತ್ವದಲ್ಲಿ ಬಿದಿರು ಬಂಗಾರ ಯೋಜನೆ ತರಲು ಮುಂದಾಗಬೇಕು. ಕರ್ನಾಟಕ ಜೀವವೈವಿಧ್ಯ ಮಂಡಳಿ ರಾಜ್ಯದ ವಿನಾಶದ ಅಂಚಿನ ಔಷಧ ಸಸ್ಯಗಳ ಗಣತಿ ಮಾಡಿದೆ.

ಈ ಮಾಹಿತಿ ಹಿನ್ನೆಲೆಯಲ್ಲಿ ಬಯಲು ಸೀಮೆ ಹಾಗೂ ಮಲೆನಾಡಿನಲ್ಲಿ ಸುಮಾರು 5000 ಎಕರೆ ಪ್ರದೇಶದಲ್ಲಿ 25 ಸ್ಥಳಗಳಲ್ಲಿ ಔಷಧ ಸಸ್ಯ ಬೆಳೆಸಲು ವಿಶೇಷ ಯೋಜನೆ ರೂಪಿಸಿ ಜಾರಿ ಮಾಡಬೇಕು. ರೈತರಿಗೆ ಸೋಲಾರ್ ಯೋಜನೆ, ಹಿತ್ತಲಿನಲ್ಲಿ ತರಕಾರಿ, ಹಣ್ಣು ಬೆಳೆಸಲು ಹಿತ್ತಲು ಹೊನ್ನು ಯೋಜನೆ, 100 ಕೆರೆಗಳ ಪುನಶ್ಚೇತನ ಕಾರ್ಯಕ್ರಮ ರೂಪಿಸಲು, ಬಜೆಟ್‌ನಲ್ಲಿ ಅನುದಾನ ನಿಗದಿಗೊಳಿಸಬೇಕು ಎಂದು ಅವರು ವಿನಂತಿಸಿದರು.

ಮಂಗನ ಕಾಯಿಲೆ ಕುರಿತು ಸಂಶೋಧನಾ ತಜ್ಞರ ಸಭೆ ನಡೆಸಲು ಪರಿಸರ ತಜ್ಞ ಡಾ.ಕೇಶವ ಕೊರ್ಸೆ ಮನವಿ ಮಾಡಿದರು. ತಜ್ಞರಾದ ವೈ.ಬಿ.ರಾಮಕರಷ್ಣ, ಡಾ. ಟಿ.ವಿ.ರಾಮಚಂದ್ರ, ಬಿ.ಎಚ್.ರಾಘವೇಂದ್ರ, ಡಾ.ಎಂ.ಕೆ.ರಮೇಶ, ಡಾ.ಎಸ್.ಬಿ.ದಂಡಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT