ಮುಂಡಗೋಡ: ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರು ಸಚಿವರಾಗಿ ಗುರುವಾರ ಬೆಂಗಳೂರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇತ್ತ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.
ಇಲ್ಲಿನ ಬಸವಣ್ಣ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ನಾಗಭೂಷಣ ಹಾವಣಗಿ ಮಾತನಾಡಿ, ‘ಯಲ್ಲಾಪುರ ಕ್ಷೇತ್ರದ ಮತದಾರರು ಸಂತಸಪಡುವ ದಿನವಾಗಿದೆ. 12 ವರ್ಷಗಳ ನಂತರ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ದೊರಕಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆಯಲು ಅನುಕೂಲವಾಗಿದೆ’ ಎಂದರು.
ಎಲ್ಎಸ್ಎಂ ಪಿ ಸೊಸೈಟಿ ಅಧ್ಯಕ್ಷ ಉಮೇಶ ಬಿಜಾಪುರ ಮಾತನಾಡಿ, ‘ಶಿವರಾಮ ಹೆಬ್ಬಾರ್ ಸಚಿವರಾಗಿರುವುದಕ್ಕೆ ಬಿಜೆಪಿ ಪಕ್ಷದಲ್ಲಿ ಸಂಭ್ರಮ ಮನೆ ಮಾಡಿದೆ. ನೂತನ ಸಚಿವರ ಅಧಿಕಾರವಧಿಯಲ್ಲಿ ತಾಲ್ಲೂಕು ಇನ್ನಷ್ಟು ಪ್ರಗತಿ ಹೊಂದಲಿದೆ’ ಎಂದರು.