ಶಿರಸಿ: ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿಯನ್ನು ಹಿಂಪಡೆದ ಹಿನ್ನೆಲೆಯಲ್ಲಿ ಭೂಮಿ ಹಕ್ಕು ಹೋರಾಟಗಾರರು ಇಲ್ಲಿನ ಬಿಡ್ಕಿಬೈಲಿನಲ್ಲಿ ಶುಕ್ರವಾರ ಸಿಹಿ ಹಂಚಿ ಸಂಭ್ರಮಿಸಿದರು.
ವೇದಿಕೆಯ ಪ್ರಮುಖ ರವೀಂದ್ರ ನಾಯ್ಕ ನೇತೃತ್ವದಲ್ಲಿ ಬಿಡ್ಕಿಬೈಲಿನಲ್ಲಿರುವ ಗಾಂಧಿ ಪ್ರತಿಮೆಗೆಭೂಮಿ ಹಕ್ಕು ಹೋರಾಟಗಾರರು ಹಾರ ಹಾಕಿ ರೈತಪರ ಘೊಷಣೆ ಕೂಗಿದರು. ಬಳಿಕ ತರಕಾರಿ ವ್ಯಾಪಾರಿಗಳು, ರೈತರಿಗೆ ಸಿಹಿ ಹಂಚಿದರು.
‘ಕೇಂದ್ರ ಸರಕಾರ ರೈತ ವಿರೋಧಿ ಕೃಷಿ ಕಾಯಿದೆ ಹಿಂದಕ್ಕೆ ಪಡೆದಿರುವುದು ರೈತರ ಹೋರಾಟಕ್ಕೆ ದೊರಕಿರುವ ಐತಿಹಾಸಿಕ ಜಯವಾಗಿದೆ. ರೈತರ ಹಿತಕ್ಕೆ ವಿರುದ್ಧವಾಗಿ ಜಾರಿಗೆ ತಂದ ಕಾಯ್ದೆ ವಿರುದ್ಧ ವರ್ಷಗಳ ಕಾಲ ನಿರಂತರ ನಡೆದ ಹೋರಾಟ ಸ್ವಾತಂತ್ರ್ಯ ಹೋರಾಟ ನೆನಪಿಸಿತು’ ಎಂದು ರವೀಂದ್ರ ನಾಯ್ಕ ಹೇಳಿದರು.
‘ಸುದೀರ್ಘ ಹೋರಾಟದಲ್ಲಿ 357 ರೈತರು ಮೃತರಾಗಿದ್ದು, ಸಾವಿರಾರು ಸಂಖ್ಯೆಯ ರೈತರಿಗೆ ನಷ್ಟ ಉಂಟಾಗಿದೆ. ನಿರಪರಾಧಿ ರೈತರ ಮೇಲೆ ದಾಖಲಾಗಿರುವ ಅಪರಾಧ ಪ್ರಕರಣ ಹಿಂಪಡೆಯಬೇಕು. ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ಲಕ್ಷ್ಮಣ ಮಾಳಕ್ಕನವರ, ರಾಜು ನರೇಬೈಲ್, ತಿಮ್ಮ ಮರಾಠಿ, ಶಿವಪ್ಪ ಹಂಚಿನಕೇರಿ, ಅಬ್ದುಲ್ ಸಾಬ್, ಇಬ್ರಾಹಿಂ ಇಸಳೂರು, ಗಣಪತಿ ನಾಯ್ಕ ಇತರರು ಇದ್ದರು.