ಕಾರವಾರ:ಪ್ರಜಾಪ್ರಭುತ್ವದ ಹಬ್ಬ ಚುನಾವಣೆಯೊಂದಿಗೆ ಯುಗಾದಿ ಸಂಭ್ರಮವೂ ಬಂದಿದ್ದು, ಹಬ್ಬದಾಚರಣೆಗೆ ಜಿಲ್ಲೆಯಾದ್ಯಂತ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಿಂದೂ ಧಾರ್ಮಿಕ ಕ್ಯಾಲೆಂಡರ್ ಪ್ರಕಾರ ವಿಕಾರಿ ನಾಮ ಸಂವತ್ಸರವನ್ನು ಸ್ವಾಗತಿಸಲು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಲಿವೆ.
ಹಬ್ಬದ ಆಚರಣೆ ಮಾಡುವವರು ಬೇವು ಬೆಲ್ಲಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳಲಿದ್ದಾರೆ.ಮಾರುಕಟ್ಟೆಯಲ್ಲೂ ಗ್ರಾಹಕರು ಹೂವು, ಹಣ್ಣುಗಳ ಖರೀದಿ ಮಾಡಿದ್ದಾರೆ. ಈ ಬಾರಿ ಯುಗಾದಿಗೆ ಹೂವಿನ ದರ ಏರಿಕೆ ಗ್ರಾಹಕರನ್ನು ಕಂಗಾಲಾಗಿಸಿದೆ. ಗುಲಾಬಿ, ಮಲ್ಲಿಗೆ, ಸೇವಂತಿಗೆ ಹೀಗೆ ಬಹುತೇಕ ಎಲ್ಲ ಹೂಗಳೂ ಒಂದು ಮೊಳಕ್ಕೆ ₹ 100ರಿಂದ ₹ 120ರಂತೆ ಮಾರಾಟವಾಗುತ್ತಿವೆ.
ಪ್ರತಿ ಕೆ.ಜಿ ಹಣ್ಣಿನ ದರವೂ ಸ್ವಲ್ಪ ಏರಿಕೆ ಕಂಡಿದ್ದುಸೇಬು ₹200, ಮೂಸಂಬಿ ₹ 80, ಅನಾನಸ್ ₹ 30, ಬಾಳೆಹಣ್ಣು (ಮಿಟ್ಕಾ) ₹ 50, ದಾಳಿಂಬೆ ₹ 100, ಚಿಕ್ಕು ₹ 80, ದ್ರಾಕ್ಷಿ 80 ಹಾಗೂ ಕಪ್ಪುದ್ರಾಕ್ಷಿ₹ 120ರಂತೆ ಮಾರಾಟವಾದವು.
ಮರಗಳ ತುಂಬ ಹೂ:ಯುಗಾದಿಗೆ ಮೊದಲು ಚಿಗುರು ಬಿಟ್ಟ ಮರಗಳಲ್ಲಿ ಹೂವಿನ ಗೊಂಚಲು ಗಮನ ಸೆಳೆಯುತ್ತಿವೆ. ನಗರದ ವಿವಿಧೆಡೆ ಬೆಳೆದಿರುವ ಬೃಹತ್ ಮರಗಳಲ್ಲಿ ಬಣ್ಣ ಬಣ್ಣದ ಹೂಗಳು ದುಂಬಿಗಳನ್ನು ಆಕರ್ಷಿಸುತ್ತಿವೆ. ತಂಗಾಳಿಯೊಂದಿಗೆ ಸುವಾಸನೆಯೂ ಜೊತೆಯಾಗಿ ಆಹ್ಲಾದಕರ ವಾತಾವರಣ ಉಂಟುಮಾಡಿವೆ.