ಶಿರಸಿ: ಇಲ್ಲಿನ ಕಸ್ತೂರಬಾ ನಗರದ ಯುವಕ ಮಾಝ್ ಸೈಯ್ಯದ್ (21) ಎಂಬ ಉರಗ ಪ್ರೇಮಿ, ಯೂಟ್ಯೂಬ್ಗೆ ವಿಡಿಯೊ ಮಾಡಿ ಹಾಕಲು ತಾವು ಹಿಡಿದ ಮೂರು ನಾಗರಹಾವುಗಳ ಜತೆ ಆಡುತ್ತಿದ್ದಾಗ ಹಾವೊಂದು ಕಚ್ಚಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಾ.13 ರಂದು ತಾಲ್ಲೂಕಿನ ದೇವರಹೊಳೆ ಬಳಿ ಘಟನೆ ನಡೆದಿತ್ತು. ಕಡಿತಕ್ಕೊಳಗಾದ ಯುವಕನನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
‘ಉರಗ ರಕ್ಷಣೆ ಮಾಡುವುದು ಹವ್ಯಾಸ. ಒಂದೇ ದಿನ ಮೂರು ಹಾವುಗಳನ್ನು ರಕ್ಷಿಸಿದ್ದೆ. ಅವುಗಳನ್ನು ಬಿಡುವ ಮುನ್ನ ವಿಡಿಯೊ ಮಾಡಿ ಯೂಟ್ಯೂಬ್ಗೆಅಪ್ಲೋಡ್ ಮಾಡುವ ಸಲುವಾಗಿ ಆಟವಾಡುವ ದೃಶ್ಯ ಸೆರೆಹಿಡಿಯುತ್ತಿದ್ದಾಗ ಘಟನೆ ನಡೆದಿದೆ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದೇನೆ’ ಎಂದು ಮಾಝ್ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ್ದಾರೆ.
ಈ ಹಾವು ಕಡಿತದ ದೃಶ್ಯವನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ. ಹಾವುಗಳ ಜತೆ ಸರಸವಾಡದಂತೆ ಸಾರ್ವಜನಿಕರಿಗೆ ಎಚ್ಚರಿಸಿದ್ದಾರೆ.