ಶಿರಸಿ: ಕೋವಿಡ್ 19 ಹೆಚ್ಚುತ್ತಿರುವ ಕಾರಣ ನಗರದ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ, ಅನೇಕ ವರ್ಷಗಳಿಂದ ಇಲ್ಲಿಯೇ ಉಳಿದಿದ್ದ ವೃದ್ಧರನ್ನು ಅವರ ಕುಟುಂಬಕ್ಕೆ ಸೇರಿಸಲಾಯಿತು.
ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧರಲ್ಲಿ ಕೆಲವರು ಕುಟುಂಬವಿದ್ದರೂ, ಮನೆಗೆ ಹೋಗಲು ನಿರಾಕರಿಸಿ ಆಸ್ಪತ್ರೆಯಲ್ಲೇ ಉಳಿದಿದ್ದರು. ಇಲ್ಲಿನ ಸಿಬ್ಬಂದಿ, ದಾದಿಯರು, ವೈದ್ಯರು ಈ ವೃದ್ಧರ ಆರೈಕೆ ಮಾಡುತ್ತಾರೆ. ಆರೋಗ್ಯದಲ್ಲಿ ಚೇತರಿಸಿಕೊಂಡರೂ ಮನೆ ಹೋಗಲು ನಿರಾಕರಿಸಿ ಇಲ್ಲಿಯೇ ಉಳಿದವರು ಇದ್ದರು. ಪ್ರಸ್ತುತ ಕೋವಿಡ್ ಪರಿಸ್ಥಿತಿಯಲ್ಲಿ ಅವರ ಪೋಷಣೆ ಕಷ್ಟವಾಗಿದ್ದರಿಂದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಜಾನನ ಭಟ್ಟ ಅವರು ಸಹಾಯ ಟ್ರಸ್ಟ್ ಮುಖ್ಯಸ್ಥ ಸತೀಶ ಶೆಟ್ಟಿ ನೆರವು ಪಡೆದು, ವೃದ್ದರನ್ನು ಕುಟುಂಬಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
‘ಐದು ವರ್ಷಗಳಿಂದ ಆಸ್ಪತ್ರೆಯಲ್ಲೇ ಉಳಿದಿದ್ದ ಕವಿತಾ ಎಂಬ ವೃದ್ಧೆ, ಆರು ತಿಂಗಳ ಹಿಂದೆ ಕುಟುಂಬದ ಸದಸ್ಯರು ಬಂದು ಕರೆದರೂ ಮನೆಗೆ ಹೋಗಿರಲಿಲ್ಲ. ಈಗ ಅವರ ಮನವೊಲಿಸಿ, ಗುರುವಾರ ಆಂಬುಲೆನ್ಸ್ನಲ್ಲಿ ಮನೆಗೆ ಬಿಟ್ಟು ಬರಲಾಯಿತು. ಮಕ್ಕಳು, ಮೊಮ್ಮಕ್ಕಳೊಂದಿಗೆ ದಿನ ಕಳೆಯುವುದಾಗಿ ಅವರು ಹೇಳಿದ್ದಾರೆ. ಇಳಿವಯಸ್ಸಿನಲ್ಲಿ ಕವಿತಾ ಅವರಿಗೆ ಆಸರೆ ದೊರೆತಂತಾಗಿದೆ’ ಎನ್ನುತ್ತಾರೆ ಸತೀಶ ಶೆಟ್ಟಿ.
ಆಸ್ಪತ್ರೆಯ ವೈದ್ಯರಾದ ಡಾ.ಚೇತನ್, ಡಾ.ನೇತ್ರಾವತಿ, ಎಎಸ್ಐ ರಾಜೇಶ ನಾಯ್ಕ, ಪೊಲೀಸ್ ಸಿಬ್ಬಂದಿ ಪ್ರಭಾವತಿ, ವಿಜಯಲಕ್ಷ್ಮಿ, ದಾದಿಯರಾದ ಲಕ್ಷ್ಮಿ, ನಾಗರತ್ನಾ ಸಹಕರಿಸಿದರು.