ಶಿರಸಿ: ಇಲ್ಲಿನ ಜೂ ವೃತ್ತದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆ ನೆನಪಿಗೆ ಈ ಬಾರಿ ಕೆಂಪುಕೋಟೆ ಮಾದರಿ ರಚಿಸಿ, ಅದರಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದೆ. ಇದರ ವೀಕ್ಷಣೆಗೆ ಜನರ ದಂಡು ಹರಿದು ಬರುತ್ತಿದೆ.
ಕಳೆದ ಹಲವು ವರ್ಷದಿಂದ ಉತ್ಸವ ಆಚರಿಸುತ್ತಿರುವ ಸಮಿತಿಯವರು ಪ್ರತಿ ಬಾರಿ ವಿವಿಧ ಬಗೆಯ ಕಲಾಕೃತಿಗಳನ್ನು ರಚಿಸಿ ಗಮನಸೆಳೆಯುತ್ತಿದ್ದಾರೆ. ಈ ಬಾರಿ ನವದೆಹಲಿಯಲ್ಲಿರುವ ಐತಿಹಾಸಿಕ ಕೆಂಪುಕೋಟೆ ಮಾದರಿ ಇಲ್ಲಿ ರೂಪ ತಳೆದಿದೆ.
ಮುಖ್ಯ ರಸ್ತೆಯ ಬದಿಯಲ್ಲಿರುವ ಕಲಾಕೃತಿ ಸಾರ್ವಜನಿಕರನ್ನು ಹೆಚ್ಚು ಸೆಳೆಯುತ್ತಿದೆ. ಪ್ರತಿನಿತ್ಯ ಸರಾಸರಿ 300ಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡುತ್ತಿದ್ದಾರೆ. ಕೋಟೆಯ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
‘ಸತತ ಒಂದು ತಿಂಗಳ ಪರಿಶ್ರಮದಿಂದ ಈ ಮಾದರಿ ರಚಿಸಲಾಗಿದೆ. ಬಟ್ಟೆ ಹಾಗೂ ಥರ್ಮಾಕೋಲ್ ಬಳಸಿ ಕಲಾಕೃತಿ ನಿರ್ಮಾಣ ಮಾಡಿದ್ದು ಸುಮಾರು ₹ 5 ಲಕ್ಷ ವೆಚ್ಚ ತಗುಲಿದೆ. ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆ ಹೊತ್ತಲ್ಲಿ ಐತಿಹಾಸಿಕ ಸ್ಮಾರಕದ ತದ್ರೂಪ ಕಲಾಕೃತಿ ಮೂಲಕ ಜನರನ್ನು ಸೆಳೆಯುವುದು ಉದ್ದೇಶವಾಗಿತ್ತು’ ಎಂದು ಉತ್ಸವ ಸಮಿತಿಯ ಪ್ರಮುಖ ರಾಮಕೃಷ್ಣ ಶಿರಾಲಿ ತಿಳಿಸಿದರು.