ಜೊಯಿಡಾ: ಅಡಿಕೇಶ್ವರ, ಮಡಿಕೇಶ್ವರ, ಉಳವಿ ಶ್ರೀ ಚನ್ನಬಸವೇಶ್ವರ ಮಹಾರಾಜ ಕೀ ಜೈ ಎನ್ನುತ್ತಾ ಸಾವಿರಾರು ಭಕ್ತರು ಚನ್ನಬಸವೇಶ್ವರನ ರಥ ಎಳೆಯುವುದರೊಂದಿಗೆ ಶನಿವಾರ ಉಳವಿ ಶ್ರೀ ಚನ್ನಬಸವೇಶ್ವರ ಜಾತ್ರೆ ಸಂಪನ್ನಗೊಂಡಿತು.
ಕೋವಿಡ್ 19 ಹಿನ್ನೆಲೆಯಲ್ಲಿ ಜಾತ್ರೆಯನ್ನು ಜಿಲ್ಲಾಡಳಿತದ ನಿರ್ದೇಶನ ದಂತೆ ಸರಳವಾಗಿ ಹಾಗೂ ಸಾಂಕೇತಿಕವಾಗಿ ಆಚರಿಸಲು ನಿರ್ಧರಿಸಲಾಗಿತ್ತು, ಇದರ ನಡುವೆಯೂ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ವಿಧಾನ ಪರಿಷತ್ ಸದಸ್ಯ ಶ್ರೀಕಾಂತ್ ಘೋಟ್ನೆಕರ.ಉಳವಿ ಟ್ರಸ್ಟ್ ಅಧ್ಯಕ್ಷ ಗಂಗಾಧರ ಕಿತ್ತೂರ ಹಾಗೂ ಗಣ್ಯರು ಶ್ರೀ ಚನ್ನಬಸವೇಶ್ವರ ರಥಕ್ಕೆ ಪೂಜೆ ಸಲ್ಲಿಸಿ ಭಕ್ತಾರೊಂದಿಗೆ ರಥ ಎಳೆಯುವುದರ ಮೂಲಕ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ನೆರೆದ ಸಾವಿರಾರು ಭಕ್ತರು ತಾ ಮುಂದು ನಾ ಮುಂದು ಎಂಬಂತೆ ಮಹಾರಥವನ್ನು ವೀರಭದ್ರ ದೇವಸ್ಥಾನದವರೆಗೆ ಎಳೆದರು.
ಈ ಬಾರಿಯ ಜಾತ್ರೆಗೆ ಸುಮಾರು 800 ಕ್ಕೂ ಅಧಿಕ ಚಕ್ಕಡಿ ಗಾಡಿಗಳು ಉಳಿವಿಗೆ ಬಂದಿದ್ದು, ಚಂದವಾಗಿ ಅಲಂಕಾರ ಮಾಡಿ ಎತ್ತುಗಳನ್ನು ಹಾಗೂ ಚಕ್ಕಡಿಗಳನ್ನು ಶೃಂಗರಿಸಲಾಗಿತ್ತು ಹಲವು ವರ್ಷಗಳಿಂದ ಸಾವಿರಾರು ಭಕ್ತರು ಚಕ್ಕಡಿಗಳ ಮೂಲಕ ಜಾತ್ರೆಗೆ ಬರುವ ಪದ್ಧತಿ ಇದೆ.