ರೋಗವನ್ನು ಪರಿಶೀಲಿಸಿದ ವಿಜಯೇಂದ್ರ ಹೆಗಡೆಯವರು, ‘ಈ ಬುಡಕೊಳೆ ರೋಗವು ಕೆಲವು ಮಣ್ಣಿನಲ್ಲಿರುವ ಫೈಟೋಪ್ತೆರಾ, ಪೀಥಿಯಂ, ರೈಝಕ್ಟೋನಿಯಾ ಶಿಲೀಂದ್ರ ರೋಗಾಣುಗಳಿಂದ ಬರುತ್ತದವೆ. ಈ ರೋಗಾಣು ಹೆಚ್ಚು ತೇವಾಂಶ ಹಿಡಿದುಕೊಳ್ಳುವ ಮಣ್ಣಿನಲ್ಲಿ ಅಭಿವೃದ್ಧಿಯಾಗುತ್ತವೆ. ಗಿಡದ ಕಾಂಡಕ್ಕೆ ಮತ್ತು ಬೇರಿಗೆ ಯಾವುದೇ ರೀತಿಯ ಗಾಯಗಳಾದಲ್ಲಿ (ಬುಡ ಬಿಡಿಸುವುದು, ಬುಡಕ್ಕೆ ತೀಕ್ಷ್ಣ ಗೊಬ್ಬರಗಳನ್ನು ಹಾಕುವುದು, ಜವುಳು ಇತ್ಯಾದಿ ಕಾರಣಗಳಿಂದ) ಈ ರೋಗಾಣುವಿನ ಪ್ರವೇಶಕ್ಕೆ ಅನುಕೂಲವಾಗುತ್ತದೆ. ಇದು ಹೆಚ್ಚಾಗಿ ಎಳೆಯ ಗಿಡಗಳಲ್ಲಿ ಮಾತ್ರ ಕಂಡುಬರುತ್ತದೆ. ಗಾಳಿಯ ಮುಖಾಂತರ ಹರಡುವ ರೋಗವಲ್ಲ. ಇದನ್ನು ನಿಯಂತ್ರಿಸಲು ಸಾಧ್ಯವಿದೆ’ ಎಂದರು.