ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ: ಐತಿಹಾಸಿಕ ಕೋಕ್ತಿ ಕೆರೆಗೆ ಕಾಯಕಲ್ಪ

ಭಟ್ಕಳ ಪಟ್ಟಣದ ಹೃದಯ ಭಾಗದಲ್ಲಿರುವ ವಿಶಾಲವಾದ ಜಲಮೂಲದ ರಕ್ಷಣೆ
Last Updated 10 ಜೂನ್ 2020, 11:29 IST
ಅಕ್ಷರ ಗಾತ್ರ

ಭಟ್ಕಳ: ಬಿರು ಬೇಸಿಗೆಯಲ್ಲೂ ನೀರು ತುಂಬಿಕೊಂಡುಜೀವಜಲದ ಸೆಲೆಯಾಗಿದ್ದ ಕೋಕ್ತಿ ಕೆರೆಗೆ ಕಾಯಕಲ್ಪ ನೀಡಲಾಗುತ್ತಿದೆ. ಹತ್ತಾರು ವರ್ಷಗಳಿಂದ ತುಂಬಿಕೊಂಡಿದ್ದ ಹೂಳು ತೆರವಾದರೆ ಅಂತರ್ಜಲ ಮತ್ತೆ ವೃದ್ಧಿಯಾಗಿ ನೀರಿನ ಬವಣೆ ನೀಗಿಸಲಿದೆ.

ತಾಲ್ಲೂಕಿನ ಸೂಸಗಡಿ ಸರ್ವೆ ನಂಬರ್ 386ರಲ್ಲಿ 9 ಎಕರೆ 6 ಗುಂಟೆ ವಿಸ್ತಾರವಾದ ಪ್ರದೇಶದಲ್ಲಿ ಈ ಐತಿಹಾಸಿಕ ಕೆರೆ ಹರಡಿಕೊಂಡಿದೆ. ಕೆರೆ ಇರುವ ಜಾಗದಿಂದ ಸುಮಾರು ಎರಡು ಕಿಲೋಮೀಟರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ನೂರಾರು ಎಕರೆ ಕೃಷಿಭೂಮಿಗೆ ಹಾಗೂ ಬಾವಿಗಳಿಗೆ ಅಂತರ್ಜಲದ ಸೆಲೆಯಾಗಿದೆ.

ಮಳೆಗಾಲ ಹೊರತು ಪಡಿಸಿದರೆ ಉಳಿದ ದಿನಗಳಲ್ಲಿ ಬರಿದಾಗಿರುತ್ತಿದ್ದ ಈ ಕೆರೆಯ ಅಭಿವೃದ್ಧಿಗೆ ಮುಂದಾದ ಶಾಸಕ ಸುನೀಲ್ ನಾಯ್ಕ, ಸತತ ಪ್ರಯತ್ನ ನಡೆಸಿ ಸರ್ಕಾರದಿಂದ₹25 ಲಕ್ಷ ಮಂಜೂರುಮಾಡಿಸಿದರು. ಚಿಕ್ಕನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸುಪರ್ದಿಯಲ್ಲಿ ಕೆರೆಯ ಹೂಳು ತೆಗೆದು ಅಭಿವೃದ್ಧಿ ಪಡಿಸಲು ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಹತ್ತಾರು ವರ್ಷಗಳ ಹಿಂದೆ ಕೋಕ್ತಿ ಕೆರೆಯಲ್ಲಿದ್ದ ನೀರಿನ ಸೆಲೆಯಿಂದಾಗಿ ಪಟ್ಟಣದ ಜನರು ನೀರಿನ ಬವಣೆಯನ್ನೇ ಕಂಡಿರಲಿಲ್ಲ. ಆ ಬಳಿಕ ಕೆರೆಯು ಹೂಳಿನಿಂದ ಬತ್ತಿ ಹೋದ ಕಾರಣ ವರ್ಷದಿಂದ ವರ್ಷಕ್ಕೆ ಬವಣೆ ಹೆಚ್ಚುತ್ತಲೇಹೋಯಿತು. 2019ರ ಬೇಸಿಗೆಯಲ್ಲಿ ಅದು ಅತ್ಯಂತ ಅಧಿಕವಾಗಿತ್ತು.ಕೆರೆಗೆಕಾಯಕಲ್ಪದಿಂದ ಖಂಡಿತವಾಗಿ ಸುತ್ತಮುತ್ತಲಿನ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದು ಸ್ಥಳೀಯ ನಿವಾಸಿ ಹರೀಶ ನಾಯ್ಕ ಗುಡಿಮನೆ ಸಂತಸ ವ್ಯಕ್ತಪಡಿಸುತ್ತಾರೆ.

‘ಈಗ ಮಂಜೂರಾಗಿರುವ ₹25ಲಕ್ಷದಲ್ಲಿ ಕೆರೆಯ ಸಂಪೂರ್ಣ ಹೂಳುತೆಗೆದು, ಸುತ್ತಲೂ ಪಿಚ್ಚಿಂಗ್ ಮಾಡಲಾಗುತ್ತದೆ. ಹೂಳು ತೆಗೆಯುವುದರಿಂದ ಮಳೆಗಾಲದಲ್ಲಿ ನೀರು ತುಂಬಿಕೊಂಡು ಬೇಸಿಗೆಯವರೆಗೂ ಸಂಗ್ರಹವಿರುತ್ತದೆ. ಇದರಿಂದ ಅಂತರ್ಜಲ ವೃದ್ಧಿಯಾಗಿ ಪಟ್ಟಣದ ಜನರಿಗೆ ನೀರಿಗೆ ತೊಂದರೆ ಆಗುವುದಿಲ್ಲ. ಕಳೆದ ವರ್ಷ ಕಡವಿನಕಟ್ಟೆ ನದಿಯಲ್ಲಿ ಹೂಳು ತೆಗೆದಿದ್ದರಿಂದ ಈ ಬಾರಿ ಅಲ್ಲಿ ಬೇಸಿಗೆಯಲ್ಲೂ ನೀರು ಇತ್ತು’ಎಂದು ಶಾಸಕ ಸುನೀಲ್ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

₹ 1 ಕೋಟಿಯ ಯೋಜನೆ:ಒತ್ತುವರಿ ಆಗಿರುವ ಕೆರೆಯ ಜಾಗವನ್ನು ತೆರವು ಮಾಡಿಸಿ, ಕೆರೆಯ ಸುತ್ತ ಬೇಲಿ, ಕುಳಿತುಕೊಳ್ಳಲು ಆಸನಗಳು, ಉದ್ಯಾನ, ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಐತಿಹಾಸಿಕ ಕೆರೆಯ ಅಭಿವೃದ್ಧಿಯ ಕನಸು ಕಂಡಿದ್ದ ಹಿರಿಯರಾದ ಡಾ.ಚಿತ್ತರಂಜನ್ ಅವರ ಕನಸನ್ನು ನನಸಾಗಿಸಲಾಗುತ್ತದೆ. ಸುಮಾರು ₹ 1ಕೋಟಿ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಸದ್ಯದಲ್ಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ’ ಎಂದು ಶಾಸಕ ಸುನೀಲ್ ನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT