ಕುಮಟಾ: ‘ಇ– ಸೊತ್ತು ಕೇವಲ ಜಿಲ್ಲೆಯ ಸಮಸ್ಯೆಯಲ್ಲ, ಇದು ಇಡೀದೇಶದ ಸಮಸ್ಯೆ. ಅದನ್ನು ನಿವಾರಿಸಲು ಸರ್ಕಾರ ಕಾನೂನು ತರಲು ಹೊರಟರೂಕೆಲವರು ನ್ಯಾಯಾಲಯದಿಂದತಡೆಯಾಜ್ಞೆ ತಂದರು. ಹಾಗಾಗಿ ಸಮಸ್ಯೆ ಹಾಗೇ ಉಳಿದಿದೆ’ ಎಂದು ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್.ಅಶೋಕ ಅಸಹಾಯಕತೆ ವ್ಯಕ್ತಪಡಿಸಿದರು.
ಕುಮಟಾದಲ್ಲಿ ಬುಧವಾರ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಯಾವ ಜಿಲ್ಲೆಗೆ ಹೋದರೂ ಅಲ್ಲಿಯ ಶಾಸಕರು ಇ– ಸೊತ್ತು ಸಮಸ್ಯೆ ಪ್ರಸ್ತಾಪಿಸುತ್ತಿದ್ದಾರೆ. ಕಗ್ಗಂಟಾಗಿರುವ ಇದರ ಬಗ್ಗೆ ಮುಖ್ಯಮಂತ್ರಿ ಜೊತೆ ಪ್ರಸ್ತಾಪಿಸಲಾಗುವುದು’ ಎಂದರು.
ಕುಮಟಾ ತಾಲ್ಲೂಕಿನ ದೀವಗಿ ಸೇರಿದಂತೆ ಜಿಲ್ಲೆಯ ಅಲ್ಲಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಯಲ್ಲಿ ಸಣ್ಣಪುಟ್ಟ ಮಾರ್ಪಾಡು ಮಾಡಬೇಕು. ಈ ಬಗ್ಗೆ ಕ್ರಮ ವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಚತುಷ್ಪಥ ಕಾಮಗಾರಿ ನಡೆಸುವ ಐ.ಆರ್.ಬಿ ಕಂಪನಿಯ ಅಧಿಕಾರಿಗಳಿಗೆ ಸೂಚಿಸಿದರು.
‘ನೆರೆಯಿಂದ ಹಾನಿಯಾದ ಮನೆಗಳಿಗೆ ₹ 5 ಲಕ್ಷದವರೆಗೆ ಪರಿಹಾರವನ್ನುಸರ್ಕಾರ ಘೋಷಿಸಿದೆ. ಹೊಸ ಮನೆ ಕಟ್ಟಿಕೊಳ್ಳುವವರಿಗೆ ₹5 ಲಕ್ಷ, ದುರಸ್ತಿ ಮಾಡಿಸಿಕೊಡುವವರಿಗೆ ₹3 ಲಕ್ಷ ಬಿಡುಗಡೆ ಮಾಡಿ’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
‘ಪ್ರತಿವರ್ಷ ನೆರೆ ಹಾನಿಗೆ ಒಳಗಾಗುವ ನದಿ ದಡ ನಿವಾಸಿಗಳಿಗೆ ಸುರಕ್ಷಿತ ಸ್ಥಳದಲ್ಲಿ ಸರ್ಕಾರ ಜಾಗ ಹಾಗೂ ಮನೆ ಕಟ್ಟಿಕೊಳ್ಳಲು ₹5 ಲಕ್ಷ ನೀಡುತ್ತದೆ. ಆದರೆ, ಅಂಥವರು ನದಿ ದಡದ ತಮ್ಮ ನಿವಾಸಕ್ಕೆ ವಾಪಸಾಗಬಾರದು’ ಎಂದು ಸೂಚಿಸಿದರು.
ಶಾಸಕ ಸುನೀಲ ನಾಯ್ಕ ಮಾತನಾಡಿ, ‘ಶರಾವತಿ ಎಡ ಬಲ ದಂಡೆಯ 60 ಕುಟುಂಬಗಳು ಪ್ರತಿವರ್ಷ ನೆರೆಯಿಂದ ತೊಂದರೆಗೆ ಗುರಿಯಾಗುತ್ತವೆ. ಅವರಿಗೆ ಸೂರು ಒದಗಿಸಲು ಜಾಗವಿರುವ ಪಹಣಿ ಸಹಿತ ಅರ್ಜಿ ನೀಡಿದರೂ ಅಧಿಕಾರಿಗಳು ಕ್ರಮ ಕೈಕೊಳ್ಳುತ್ತಿಲ್ಲ’ ಎಂದು ದೂರಿದರು.
ಈ ಬಗ್ಗೆಸಚಿವರು, ‘ಗೋಮಾಳ ಜಾಗವನ್ನು ಇಂಥ ಉದ್ದೇಶಕ್ಕೆ ಮಂಜೂರಿ ಮಾಡಬಹುದು’ ಎಂದು ಸ್ಪಷ್ಟಪಡಿಸಿದರು.
‘ಇದೂ ಕರಾವಳಿ ಜಿಲ್ಲೆಯೇ..’:‘ಸಚಿವ ಆರ್.ಅಶೋಕ ಅವರನ್ನೂ ಒಳಗೊಂಡಂತೆಎಲ್ಲರೂ ಕರಾವಳಿ ಎಂದಾಕ್ಷಣ ದಕ್ಷಿಣ ಕನ್ನಡ, ಉಡುಪಿ ಎಂದು ಭಾವಿಸುತ್ತಾರೆ. ಉತ್ತರ ಕನ್ನಡ ಕೂಡ ಕರಾವಳಿ ಜಿಲ್ಲೆ ಎನ್ನುವುದು ಯಾರಿಗೂ ನೆನಪಾಗುವುದೇ ಇಲ್ಲ’ ಎಂದು ಶಾಸಕ ದಿನಕರ ಶೆಟ್ಟಿ ವಿಷಾದಿಸಿದರು.
‘ಇಲ್ಲಿ ಕರಾವಳಿ ನಿಯಂತ್ರ ವಲಯ, ಹಸಿರು ಪಟ್ಟಿ, ಅರಣ್ಯ, ಸಮುದ್ರದ ನಡುವೆ ಕಿರಿದಾದ ಪ್ರದೇಶದಲ್ಲಿ ಬದುಕುವ ಜನರನ್ನು ಈಗ ಇ– ಸೊತ್ತು ಎನ್ನುವ ಭೂತ ಆವರಿಸಿ ಹಿಂಡಿ ಹಿಪ್ಪೆ ಮಾಡುತ್ತಿದೆ’ ಎಂದುಗಮನ ಸೆಳೆದರು.
ಸಂಸದ ಅನಂತಕುಮಾರ ಹೆಗಡೆ ಮಾತನಾಡಿ, ‘ಇ– ಸೊತ್ತು ಸಮಸ್ಯೆಯಿಂದಾಗಿ ಇಡೀ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಸಂಪೂರ್ಣ ಸ್ಥಗಿತಗೊಂಡಿದೆ. ಜನರ ಮನೆಯನ್ನು ಒಡೆದು ಮಾಡುವಂಥ ಅಗಲ ರಸ್ತೆ ಯಾರಿಗೂ ಬೇಡ. ಅವರವರ ಜಾಗದಲ್ಲಿ ಒಂದು ಮನೆ ಕಟ್ಟಿಕೊಳ್ಳುವಂಥ ಅವಕಾಶವನ್ನು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಮೊಹಮ್ಮದ್ರೋಶನ್, ಶಾಸಕಿ ರೂಪಾಲಿ ನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.