‘ಜಿಲ್ಲೆಯ ಹೆಚ್ಚಿನ ಭಾಗಗಳು ಭೌಗೋಳಿಕವಾಗಿ ಮಲೆನಾಡು ಪ್ರದೇಶವನ್ನು ಹೊಂದಿದ್ದು, ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ತೋಟಗಾರಿಕಾ ಬೆಳೆಗಳಾದ ಅಡಿಕೆ, ಕಾಳುಮೆಣಸು, ಬಾಳೆ ಇವುಗಳ ಜೊತೆಗೆ ಭತ್ತ ಹಾಗೂ ಕಬ್ಬು ಬೆಳೆಯಲಾಗುತ್ತದೆ. ಬಹುಪಾಲು ಜನರು ಅಡಿಕೆ ಹಾಗೂ ಕಾಳುಮೆಣಸು ಬೆಳೆಯುತ್ತಿದ್ದಾರೆ. ಅತಿವೃಷ್ಟಿ ಕಾರಣ ಈ ಬೆಳೆಗೆ ವ್ಯಾಪಕವಾಗಿ ಕೊಳೆರೋಗ ಹರಡಿದೆ.ಶೇ 40ರಿಂದ 60ರಷ್ಟು ಬೆಳೆ ರೋಗಕ್ಕೆ ತುತ್ತಾಗಿದೆ. ಕಾಳುಮೆಣಸಿನ ಬಳ್ಳಿಗಳು ನಾಶವಾಗಿದ್ದು, ಪುನಃ ಬಳ್ಳಿಗಳನ್ನು ಬೆಳೆಸಿ, ಫಲ ಪಡೆಯಲು ನಾಲ್ಕೈದು ವರ್ಷಗಳು ಬೇಕಾಗುತ್ತವೆ. ಮಳೆ ಹೆಚ್ಚಿರುವುದರಿಂದ ರೋಗ ಉಲ್ಬಣಿಸುವ ಸಾಧ್ಯತೆಯಿದೆ. ಇರುವ ಬೆಳೆ ಉಳಿಸಿಕೊಳ್ಳಲು ಜಿಂಕ್, ಬೋರಾನ್, ಬೇವಿನಹಿಂಡಿ, ಕೃಷಿ ಸುಣ್ಣ ಮೊದಲಾದ ಪೋಷಕಾಂಶಗಳನ್ನು ಉಚಿತವಾಗಿ ನೀಡಬೇಕು. ಕೃಷಿಗಾಗಿ ರೈತರು ಮಾಡಿರುವ ಆಸಾಮಿ ಸಾಲವನ್ನು ಕೃಷಿ ಸಾಲವನ್ನಾಗಿ ಪರಿವರ್ತಿಸಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಲಾಗುತ್ತಿದೆ. ಆಸಾಮಿ ಸಾಲ ಕೃಷಿ ಸಾಲವಾದಾಗ ಮಾತ್ರ ಸರ್ಕಾರ ಘೋಷಿಸುವ ಸಾಲ ಮನ್ನಾ ಬಡ್ಡಿ ರಿಯಾಯಿತಿಯಂತಹ ಯೋಜನೆ ರೈತರಿಗೆ ಸಿಗುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿಯಲ್ಲಿ ವಿನಂತಿಸಲಾಗಿದೆ.