ಯಲ್ಲಾಪುರ: ಪಟ್ಟಣದ ಬಸವೇಶ್ವರ ಕಾಂಪ್ಲೆಕ್ಸ್ನಲ್ಲಿರುವ ದೇವೂ ಸ್ವೀಟ್ಸ್ ಮತ್ತು ಬೇಕರಿಗೆ ಶುಕ್ರವಾರ ತಡರಾತ್ರಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ವಿದ್ಯುತ್ ಶಾರ್ಟ್ ಸರ್ಕೀಟ್ನಿಂದಾಗಿ ಬೆಂಕಿ ತಗುಲಿರಬಹುದೆಂದು ಅಂದಾಜಿಸಲಾಗಿದೆ. ಶುಕ್ರವಾರ ಸಂಜೆ ಮಳೆ, ಗಾಳಿ ಇತ್ತು. ಎರಡು ಮೂರು ಬಾರಿ ವಿದ್ಯುತ್ ಸ್ಥಗಿತಗೊಂಡು, ಪುನಃ ಬಂದಿತ್ತು. ಆ ಸಂದರ್ಭದಲ್ಲಿ ಹೆಚ್ಚಿನ ವೋಲ್ಟೇಜ್ ಬಂದು ಶಾರ್ಟ್ ಸರ್ಕೀಟ್ ಆಗಿರುವ ಸಾಧ್ಯತೆಯಿದೆ.
ಬೆಂಕಿ ಒಳಗಿನಿಂದಲೇ ಸುಡುತ್ತಾ ಸಾಮಗ್ರಿಗಳನ್ನು, ಕೌಂಟರ್, ಎಲ್ಲವನ್ನೂ ಆಹುತಿ ತೆಗೆದುಕೊಂಡಿದೆ. ಅಂಗಡಿಯ ಶಟರ್ಸ್ ಒಳಗಿನಿಂದ ದಟ್ಟವಾದ ಹೊಗೆ ಹೊರಬರುತ್ತಿರುವುದನ್ನು ಗಮನಿಸಿದ ಎದುರು ಕಾಂಪ್ಲೆಕ್ಸ್ನಲ್ಲಿರುವ ಸುವರ್ಣ ಬ್ಯಾಂಕಿನ ಭದ್ರತಾ ಸಿಬ್ಬಂದಿ ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಲಕ್ಷಾಂತರ ರೂಪಾಯಿ ಹಾನಿ ಅಂದಾಜಿಸಲಾಗಿದೆ.
ಪೊಲೀಸರು, ಅಗ್ನಿಶಾಮಕ ದಳದವರು ಸಾಹಸಪಟ್ಟು ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಬೆಂಕಿ ಇತರ ಅಂಗಡಿಗಳಿಗೆ ಹಬ್ಬಿಲ್ಲ. ಇಲ್ಲವಾದಲ್ಲಿ ಇಡೀ ಕಾಂಪ್ಲೆಕ್ಸ್ ಬೆಂಕಿಗೆ ಆಹುತಿಯಾಗುತ್ತಿತ್ತು.
'ಕೌಂಟರ್, ಫ್ರಿಜ್ ಎಲ್ಲಾ ಸಾಮಗ್ರಿ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ಹಾನಿಯಾಗಿದೆ. ಎಲ್ಲಾ ಸುಟ್ಟು ಹೋಗಿದ್ದು, ಮತ್ತೆ ಮೊದಲಿನಿಂದ ಆರಂಭಿಸಬೇಕಾಗಿದೆ. ಇಲ್ಲಿನ ಗ್ರಾಮದೇವಿ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ' ಎಂದು ಅಂಗಡಿ ಮಾಲೀಕ ದೇವರಾಮ್ ರಾಥೋಡ್ ಕಣ್ಣೀರಿಟ್ಟರು.