ಕಾರವಾರ: ‘ಲಾಕ್ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಬಡ ಹಾಗೂ ಗ್ರಾಮೀಣ ಪ್ರದೇಶದವರ ಕಲಿಕೆಗೆ ಸಮಸ್ಯೆ ಎದುರಾಗಿದೆ. ಸರ್ಕಾರದಿಂದ ಟ್ಯಾಬ್ ನೀಡುತ್ತಿರುವುದು ಅನುಕೂಲವಾಗಲಿದೆ’ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ಮಾರ್ಟ್ ಕ್ಲಾಸ್ ರೂಂ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ಇದೇ ಮೊದಲ ಬಾರಿಗೆ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ಸರ್ಕಾರ ಟ್ಯಾಬ್ ವಿತರಿಸುತ್ತಿದೆ’ ಎಂದರು.
ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ‘ಬಿ.ಎ, ಬಿ.ಕಾಂ, ಬಿ.ಎಸ್.ಸಿ ಹಾಗೂ ಬಿ.ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಮತ್ತು ಕಂಪ್ಯೂಟರ್ಗಳನ್ನು ಸರ್ಕಾರ ವಿತರಿಸುತ್ತಿರುವುದು ಮಹತ್ವದ ಕಾರ್ಯ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶ ಗಿರಿ ಮಾತನಾಡಿ, ‘ಸ್ಮಾರ್ಟ್ ಕ್ಲಾಸ್ಗಳ ಮೂಲಕ ಉಪನ್ಯಾಸಕರು ಮತ್ತಷ್ಟು ಪರಿಣಾಮಕಾರಿಯಾಗಿ ಬೋಧಿಸಲು ಸಾಧ್ಯವಿದೆ. ವಿದ್ಯಾರ್ಥಿಗಳಿಗೆ ಸುಲಭವಾಗಿ ಮನದಟ್ಟಾಗುತ್ತದೆ’ ಎಂದರು.
ಕಾಲೇಜಿನ ಎಂಟು ಮತ್ತು ಮಹಿಳಾ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್, ಕಂಪ್ಯೂಟರ್ಗಳನ್ನು ವಿತರಿಸಲಾಯಿತು. ಡಾ.ವಿಜಯಾ ನಾಯ್ಕ ಸ್ವಾಗತಿಸಿದರು. ವಿದ್ಯಾರ್ಥಿನಿ ಐಶ್ವರ್ಯಾ ಭಟ್ ಪ್ರಾರ್ಥಿಸಿ, ನಾಡಗೀತೆ ಹಾಡಿದರು. ಪ್ರೊ.ರಾಜೇಶ್ವರಿ ಭಟ್ ವಂದಿಸಿದರು.
ಕಾಲೇಜಿನ ಐ.ಟಿ ಸಂಯೋಜಕ ಡಾ.ಸುಧೀರ ಮನವಾಡಿ, ಐ.ಕ್ಯು.ಎ.ಸಿ ಸಂಯೋಜಕ ಡಾ.ವಸಂತಕುಮಾರ.ಬಿ, ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.