ಶಿರಸಿ: ‘ದೇಶಕ್ಕೆ ಸ್ವಾತಂತ್ರ್ಯ ಕೊಡುವಲ್ಲಿ ಕಾಂಗ್ರೆಸ್ ನಾಯಕರ ಹೋರಾಟ ಪ್ರಮುಖ ಪಾತ್ರವಹಿಸಿತ್ತು. ದೇಶ ಸದ್ಯ ಎದುರಿಸುತ್ತಿರುವ ಗಂಡಾಂತರದ ಸ್ಥಿತಿಯಿಂದ ಹೊರಬರಲೂ ಕಾಂಗ್ರೆಸ್ಸಿಗರ ಹೋರಾಟ ಅಗತ್ಯವಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು.
‘ಕ್ವಿಟ್ ಇಂಡಿಯಾ ಚಳವಳಿ ದಿನ’ದ ಅಂಗವಾಗಿ ಇಲ್ಲಿನ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಹಿಂದೆ ದೇಶವನ್ನು ಆಳಿದ ನಾಯಕರ ದೂರದೃಷ್ಟಿತ್ವದ ಯೋಜನೆಗಳ ಪರಿಣಾಮ ಇಂದಿಗೂ ದೇಶ ಸುಭಿಕ್ಷವಾಗಿದೆ. ಈಚೆಗೆ ಅಧಿಕಾರ ಹಿಡಿದವರಿಂದ ಪರಿಸ್ಥಿತಿ ಹದಗೆಟ್ಟಿದೆ. ಬದಲಾವಣೆಯ ಪರ್ವಕ್ಕೆ ಜನ ಕಾಯುತ್ತಿದ್ದಾರೆ’ ಎಂದರು.
ಪ್ರಧಾನ ಕಾರ್ಯದರ್ಶಿ ಎಸ್.ಕೆ. ಭಾಗವತ, ‘ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ 1942ರ ಕ್ವಿಟ್ ಇಂಡಿಯಾ ಚಳವಳಿ ಅತ್ಯಂತ ಮಹತ್ವದ ಘಟನೆ. ಇದನ್ನು ಸ್ಮರಣೆಯಲ್ಲಿಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ’ ಎಂದರು.