ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಬಂಡಿಹಬ್ಬದ ಉತ್ಸವದಲ್ಲಿ ಮುಖ್ಯ ಗುನಗರು ದೇವಿಯ ಕಳಸವನ್ನು ಹೊತ್ತು, ಮಹಾಬಲೇಶ್ವರ ದೇವರ ಒಂದು ಸುತ್ತು ಹಾಕಿ ಅಪ್ಪಣೆ ಕೊಟ್ಟ ನಂತರ ಬಂಡಿ ಎಳೆಯಲಾಯಿತು. ಬಂಡಿಯು ರಥಬೀದಿಯಲ್ಲಿರುವ ಕಳಸದ ಮನೆಯಿಂದ ಪ್ರಾರಂಭವಾಗಿ ಮುಖ್ಯ ರಸ್ತೆಯಲ್ಲಿ ಸಾಗಿ ಭದ್ರಕಾಳಿ ದೇವಸ್ಥಾನದವರೆಗೆ ಎಳೆಯಲಾಯಿತು. ಬಂಡಿಯನ್ನು ಹರಕೆದಾರರ ಬಾಳೆಕೊನೆಗಳು, ಹಲಸಿನ ಹಣ್ಣು ಮತ್ತು ತೆಂಗಿನ ಕಾಯಿಗಳಿಂದ ಸಿಂಗರಿಸಲಾಗಿತ್ತು. ಬಂಡಿಯ ಹಿಂದುಗಡೆ ದೇವಿಯ ಆಕರ್ಷಣೆಯಾದ ದೇವಿಯ ಕಳಸವನ್ನು ಮುಖ್ಯ ಗುನಗರು ಹೊತ್ತು ಸೂಕ್ತ ಮಾರ್ಗದರ್ಶನ ನೀಡುತ್ತಿದದ್ದು ಕಂಡು ಬಂತು.