ಭಟ್ಕಳ: ‘ಇಂದಿನ ಮಾಧ್ಯಮ ಕ್ಷೇತ್ರದ ಬೆಳವಣಿಗೆಯನ್ನು ನೋಡಿದರೆ ಆತಂಕವಾಗುತ್ತಿದೆ. ಮಾಧ್ಯಮದ ಹೊಣೆಗಾರಿಕೆ ಮರೆತಿದ್ದೇವೆ. ಭಾರತವು ಬಹುತ್ವದ ದೇಶವಾಗಿದೆ. ನಮ್ಮಲ್ಲಿ ಮೊದಲು ಸಾಮಾಜಿಕ ಬದ್ಧತೆ ಬೇಕಿದೆ ’ ಎಂದು ಹಿರಿಯ ಪತ್ರಕರ್ತ ಶಶಿಧರ ಭಟ್ ಹೇಳಿದರು.
ಪಟ್ಟಣದಲ್ಲಿ ಭಾನುವಾರ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ನ ಜಿಲ್ಲಾ ಘಟಕದಿಂದ ಪ್ರದಾನ ಮಾಡಲಾದ ‘ಹರ್ಮನ್ ಮೊಗ್ಲಿಂಗ್’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸುನೀಲ್ ನಾಯ್ಕ ಮಾತನಾಡಿ, ‘ಮಾಧ್ಯಮಗಳು ಜನಪರವಾದ ಕೆಲಸ ಮಾಡಬೇಕು. ಪತ್ರಿಕೆಗಳು ಜನರಿಗೆ ಸಮಾಜದ ಆಗುಹೋಗುಗಳನ್ನು ಮೌಲ್ಯಯುತವಾಗಿ ತಲುಪಿಸುವ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ಪತ್ರಕರ್ತರ ಸೇವೆ ಸಮಾಜಕ್ಕೆ ಆಗಬೇಕಿದೆ’ ಎಂದರು.
ಉಪ ವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಮಾತನಾಡಿ, ‘ಪತ್ರಿಕೆ, ಮಾಧ್ಯಮದಿಂದಲೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿ ಈ ಸ್ಥಾನಕ್ಕೆ ಬಂದಿದ್ದೇವೆ. ಮಾಹಿತಿ ತಂತ್ರಜ್ಞಾನದ ಕಾಲ ಇದಾಗಿದೆ. ಲೋಪದೋಷ ಸುಧಾರಿಸಿಕೊಂಡು ಆಡಳಿತದಲ್ಲಿ ಕೆಲಸ ಮಾಡಲು ಮಾಧ್ಯಮದ ಸಹಕಾರ ಅಗತ್ಯ’ ಎಂದು ಹೇಳಿದರು.
ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಾಜ್ಯ ಪ್ರತಿನಿಧಿ ಶಿವಾನಿ ಶಾಂತಾರಾಮ ಮಾತನಾಡಿ, ‘ಪತ್ರಿಕೆಗಳನ್ನು ಓದುವುದು ಹಿಂದಿನಿಂದಲೂ ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯ. ಅದನ್ನೇ ಇಂದಿನ ಪೀಳಿಗೆ ಮುಂದುವರಿಸಿಕೊಂಡು ಬರಬೇಕಾದ ಜವಾಬ್ದಾರಿಯಿದೆ’ ಎಂದು ಹೇಳಿದರು.
ಭಟ್ಕಳ ಎಜುಕೇಶನ್ ಟ್ರಸ್ಟ್ ವ್ಯವಸ್ಥಾಪಕ ರಾಜೇಶ ನಾಯಕ ಮಾತನಾಡಿದರು. ಯೂನಿಯನ್ನ ಜಿಲ್ಲಾ ಘಟಕದ ಅಧ್ಯಕ್ಷ ಮನಮೋಹನ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವಿ.ಸುಬ್ರಹ್ಮಣ್ಯ ಸ್ವಾಗತಿಸಿದರು. ಜಿಲ್ಲಾ ಸಂಘದ ಹಿರಿಯ ಉಪಾಧ್ಯಕ್ಷ ದೀಪಕ ಕುಮಾರ ಶೇಣ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು.