ಗೋಕರ್ಣ:ಸಾಲುಸಾಲು ರಜಾದಿನಗಳು ಬಂದ ಕಾರಣ ಇಲ್ಲಿನ ಕಡಲತೀರದ ಬಹುತೇಕ ವಸತಿಗೃಹಗಳು ಪ್ರವಾಸಿಗರಿಂದ ಭರ್ತಿಯಾಗಿವೆ. ಅವುಗಳಲ್ಲಿ ಮೊದಲ ಹಂತದ ಚುನಾವಣೆ ನಡೆದ ಬೆಂಗಳೂರಿನ ನೋಂದಣಿ ಸಂಖ್ಯೆಯುಳ್ಳ ನೂರಾರು ವಾಹನಗಳಲ್ಲಿ ಬಂದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ.
ಮತದಾನದ ಸಲುವಾಗಿ ಗುರುವಾರ ಸಾರ್ವತ್ರಿಕ ರಜೆ, ಶುಕ್ರವಾರ ಗುಡ್ಫ್ರೈಡೇ, ಶನಿವಾರ ಹಾಗೂ ಭಾನುವಾರ ಸೇರಿ ನಾಲ್ಕು ರಜಾದಿನಗಳಿವೆ. ಹೀಗಾಗಿ ಇಲ್ಲಿನ ಕಡಲತೀರಗಳಿಗೆ ಪ್ರವಾಸಿಗರು ಲಗ್ಗೆಯಿಟ್ಟಿದ್ದಾರೆ.
‘ಪ್ರವಾಸಿಗರಲ್ಲಿ ಬಹುತೇಕರು ಗುರುವಾರವೇ ತಲುಪಿದ್ದಾರೆ. ಅವರೆಲ್ಲ ಮತದಾನ ಮಾಡಿರುವ ಬಗ್ಗೆ ಅನುಮಾನವಿದೆ.ಮತದಾನ ಜಾಗೃತಿಗೆಚುನಾವಣಾ ಆಯೋಗ ಎಷ್ಟೇ ಪ್ರಯತ್ನ ಪಟ್ಟರೂ ಮತದಾರರಿಂದ ಸಹಕಾರವಿಲ್ಲದಿದ್ದರೆ ಏನು ಪ್ರಯೋಜನ’ ಎಂಬುದು ಸ್ಥಳೀಯರಾದ ರಾಮನಾಥ ಅವರ ಪ್ರಶ್ನೆಯಾಗಿದೆ.
ಕುಡ್ಲೆ ಕಡಲತೀರದಲ್ಲಿ ಮಾತಿಗೆ ಸಿಕ್ಕ ಪ್ರವಾಸಿ ಯುವಕ, ಬೆಂಗಳೂರಿನ ಸಾಫ್ಟ್ವೇರ್ ಸಂಸ್ಥೆಯೊಂದರ ಉದ್ಯೋಗಿ ರಮೇಶ್, ‘ನಾನು ಮೂಲತಃ ಬೆಳಗಾವಿಯವನು. ಉತ್ತರ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನವಿದೆ. ಸಾಲುಸಾಲು ರಜಾದಿನಗಳಿರುವ ಕಾರಣಗೆಳೆಯರ ಜೊತೆ ಪ್ರವಾಸ ಬಂದಿದ್ದೇನೆ’ ಎಂದರು.
ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿದ ಮತ್ತೊಬ್ಬ ಪ್ರವಾಸಿ, ‘ನನ್ನ ವೋಟುಬೆಂಗಳೂರಿನಿಂದಹೊರಗಿದೆ. ಒಂದುಮತ ಹಾಕಲು ನೂರಾರು ಕಿಲೋಮೀಟರ್ ದೂರ ಹೋಗುವ ಬದಲು ಸ್ನೇಹಿತರ ಜೊತೆ ಮೊದಲ ಸಲ ಗೋಕರ್ಣಕ್ಕೆ ಬಂದಿದ್ದೇನೆ’ ಎಂದು ಹೇಳಿದರು. ಆದರೆ, ತಮ್ಮ ಹೆಸರು, ಊರು ತಿಳಿಸಲು ನಿರಾಕರಿಸಿದರು.