ಹೊನ್ನಾವರ: ತಾಲ್ಲೂಕಿನ ಹಳದೀಪುರ ಗ್ರಾಮದ ಅಗ್ರಹಾರದಲ್ಲಿರುವ ಮಹಾಗಣಪತಿ ದೇವಸ್ಥಾನದ ಬಂಗಾರದ ಆಭರಣ ಸೋಮವಾರ ಮಧ್ಯಾಹ್ನ ಕಳವಾಗಿದೆ. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.
ದೇವಸ್ಥಾನದ ಗರ್ಭಗುಡಿಯ ಬಾಗಿಲ ಚಿಲಕ ತೆಗೆದು ಒಳಗೆ ಹೋಗಿರುವ ಕಳ್ಳರು ಹರಿವಾಣದಲ್ಲಿಟ್ಟಿದ್ದ 20 ಗ್ರಾಂ ತೂಕದ ಮುಖ ಕವಚ, 30 ಗ್ರಾಂ ತೂಕದ ಹೊಟ್ಟೆ ಕವಚ ಹಾಗೂ 50 ಗ್ರಾಮದ ತೂಕದ ಕಾಲು ಕವಚ ಸೇರಿದಂತೆ ಅಂದಾಜು ₹ 4 ಲಕ್ಷ ಮೌಲ್ಯದ ಬಂಗಾರದ ಆಭರಣ ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಗಣಪತಿ ಸಭಾಹಿತ ದೂರು ನೀಡಿದ್ದು, ಅಪರಾಧ ವಿಭಾಗದ ಪಿಎಸ್ಐ ಸಾವಿತ್ರಿ ನಾಯಕ ತನಿಖೆ ಕೈಗೊಂಡಿದ್ದಾರೆ.