ಕಾರವಾರ: ರಾಷ್ಟ್ರೀಯ ಹೆದ್ದಾರಿಯನ್ನಾಗಿ (ಸಂಖ್ಯೆ 766 ಇಇ) ಮೇಲ್ದರ್ಜೆಗೇರಿಸುವ ಕಾಮಗಾರಿ ಸಲುವಾಗಿಶಿರಸಿ– ಕುಮಟಾ ರಸ್ತೆಯಲ್ಲಿ ಅ.12ರಿಂದ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. 18 ತಿಂಗಳ ಅವಧಿಗೆ ಇದು ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಶುಕ್ರವಾರ ಅಧಿಸೂಚನೆ ಹೊರಡಿಸಿದ್ದಾರೆ.
ಪರ್ಯಾಯ ರಸ್ತೆಗಳು:ಕರಾವಳಿ ಮತ್ತು ಹುಬ್ಬಳ್ಳಿ, ಹಾವೇರಿ ಭಾಗಕ್ಕೆ ಸಂಪರ್ಕ ಕೊಂಡಿಯಾಗಿದ್ದ ಈ ರಸ್ತೆಗೆ ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗಿದೆ.
ಕುಮಟಾದಿಂದ ಸಿದ್ದಾಪುರದ ಮೂಲಕ ಸಾಗಿ ಶಿರಸಿಗೆ ತಲುಪುವುದು (ಲಘು ವಾಹನಗಳು ಮಾತ್ರ), ಅಂಕೋಲಾದಿಂದ ಯಲ್ಲಾಪುರಕ್ಕೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಾಗಿ ರಾಜ್ಯ ಹೆದ್ದಾರಿ 93ರಲ್ಲಿ ಶಿರಸಿಗೆ ಹೋಗುವುದು. ಹೊನ್ನಾವರದಿಂದ ಮಾವಿನಗುಂಡಿ ಮೂಲಕ ಸಾಗಿ ಸಿದ್ದಾಪುರಕ್ಕೆ ಹೋಗಿ ಶಿರಸಿಗೆ ತಲುಪಬಹುದು. ಈ ರಸ್ತೆಗಳಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಮೇಲ್ದರ್ಜೆಗೇರಲಿರುವ ರಸ್ತೆಯಲ್ಲಿ ಕುಮಟಾದಿಂದ ಶಿರಸಿಗೆ 60 ಕಿಲೋಮೀಟರ್ ದೂರವಾಗುತ್ತಿತ್ತು. ಈಗ ಸಿದ್ದಾಪುರದ ಮೂಲಕ ಸಾಗಿದರೆ ಸುಮಾರು 90 ಕಿಲೋಮೀಟರ್, ಹೊನ್ನಾವರದ ಮೂಲಕ ಸಾಗಿದರೆ 125 ಕಿಲೋಮೀಟರ್, ಯಲ್ಲಾಪುರದ ಮೂಲಕ ಸಾಗಿದರೆ ಸುಮಾರು 155 ಕಿಲೋಮೀಟರ್ ದೂರವಾಗಲಿದೆ.