ಯಲ್ಲಾಪುರ: ತಾಲ್ಲೂಕಿನಲ್ಲಿ ಮಳೆಯಿಂದ ಅವಘಡಗಳು ಮುಂದುವರಿದಿದ್ದು, ಅರಬೈಲ್ ಘಟ್ಟದಲ್ಲಿ ಶನಿವಾರ ಗುಡ್ಡ ಮತ್ತೆ ಕುಸಿದಿದೆ. ರಾಷ್ಟ್ರೀಯ ಹೆದ್ದಾರಿ 63ರ ಒಂದುಭಾಗ ಶುಕ್ರವಾರ ಕುಸಿದಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ.
ಈ ಹೆದ್ದಾರಿ ದುರಸ್ತಿಯಾಗುವ ತನಕ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಕಾರವಾರ, ಅಂಕೋಲಾ ಭಾಗದಿಂದ ಯಲ್ಲಾಪುರ, ಹುಬ್ಬಳ್ಳಿಗೆ ಸಾಗುವವರು ಈಗ ಕುಮಟಾ- ಹೊನ್ನಾವರ- ಸಿದ್ದಾಪುರ- ಶಿರಸಿ ಮೂಲಕ ಹೋಗುವಂತೆ ಸೂಚಿಸಿದ್ದಾರೆ.
ಯಲ್ಲಾಪುರ ತಾಲ್ಲೂಕಿನ ತಳಕೆಬೈಲ್ನಲ್ಲಿ ಗುಡ್ಡ ಕುಸಿದ ಪ್ರದೇಶಕ್ಕೆ ಸಚಿವ ಶಿವರಾಮ ಹೆಬ್ಬಾರ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಕಳಚೆಯಲ್ಲಿ ಮನೆ ಬಿದ್ದು ಮೃತಪಟ್ಟ ದೇವಕಿ ಗಾಂವ್ಕರ್ ಅವರ ಕುಟುಂಬದವರಿಗೆ ರೂ. ಐದು ಲಕ್ಷದ ಚೆಕ್ ವಿತರಿಸಿದರು.
ಉಪ ವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್, ಎ.ಸಿ.ಎಫ್ ಹಿಮವತಿ ಭಟ್ಟ, ಆರ್.ಎಫ್.ಒ ಪೆಡ್ನೇಕರ್ ಇದ್ದರು.