ಕಾರವಾರ: ‘ಗಂಗಾಕಲ್ಯಾಣ ಯೋಜನೆಯಡಿ ಪಂಪ್ಸೆಟ್ಗಳನ್ನು ಪಡೆದ ಫಲಾನುಭವಿಗಳಿಂದ ಅಧಿಕಾರಿಗಳು ತಲಾ ₹ 5 ಸಾವಿರ ಪಡೆದುಕೊಂಡಿದ್ದಾರೆ’ ಎಂಬದೂರು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಕೆರಳಿಸಿತು. ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಿ, ವೇತನ ಬಡ್ತಿ ತಡೆಯಲು ಶಿಫಾರಸು ಮಾಡುವಂತೆ ಜಿಲ್ಲಾಧಿಕಾರಿಗೆ ತಾಕೀತು ಮಾಡಿದರು.
ಜಿಲ್ಲಾ ಪಂಚಾಯ್ತಿಯಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಟ್ಕಳ ಶಾಸಕ ಸುನೀಲ ನಾಯ್ಕ ಈ ವಿಚಾರ ಪ್ರಸ್ತಾಪಿಸಿದರು. ‘ಪಂಪ್ಸೆಟ್ಗಳನ್ನು ವಿತರಿಸುವಾಗ ಭಟ್ಕಳದಲ್ಲಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.ರಾತ್ರಿ ಎಂಟು ಗಂಟೆಯವರೆಗೂ ವಿತರಣೆ ಮಾಡಲಾಗಿದೆ’ ಎಂದು ಆರೋಪಿಸಿದರು.
ಈ ಬಗ್ಗೆ ನಿಗಮದ ವ್ಯವಸ್ಥಾಪಕ ಡಿ.ಡಿ.ನಾಯ್ಕ, ಯಾರಿಂದಲೂ ಹಣ ಪಡೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದರಿಂದ ತೃಪ್ತರಾಗದಸಚಿವರು, ಶಾಸಕರನ್ನು ಯಾಕೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಕೇಳಿದರು. ಇದಕ್ಕೆ ಉತ್ತರಿಸಲು ಅಧಿಕಾರಿ ತಡಕಾಡಿದಾಗ ಸಚಿವರು ಸಿಟ್ಟಾದರು.
ನಿಯೋಜಿಸದಂತೆ ತಾಕೀತು:‘ಜಿಲ್ಲೆಯಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳಿಗೆ ಜುಲೈ 1ರ ಮೊದಲು ಅತಿಥಿ ಶಿಕ್ಷಕರನ್ನುನಿಯೋಜನೆ ಮಾಡಬೇಕು. ನನ್ನ ಗಮನಕ್ಕೆ ತಾರದೇ ಹಳಿಯಾಳ ಮತ್ತು ಜೊಯಿಡಾ ತಾಲ್ಲೂಕುಗಳಿಂದ ಶಿಕ್ಷಕರನ್ನು ಬೇರೆಡೆಗೆ ನಿಯೋಜನೆ ಮಾಡಿದರೆಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಿದರು.
‘ಖಾಲಿಯಿರುವ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಆದೇಶವಾಗಲೀ ಆಗದಿರಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕು. ಅವರಿಗೆ ಸರ್ಕಾರ ವೇತನ ಕೊಡದಿದ್ದರೆ ನಾನೇ ಹಣ ಕೊಡುತ್ತೇನೆ’ಎಂದುಭರವಸೆ ನೀಡಿದರು.
ಇದಕ್ಕೂ ಮೊದಲು ಮಾತನಾಡಿದ ಜಿಲ್ಲಾ ಪಂಚಾಯ್ತಿಯಜೊಯಿಡಾ ಕ್ಷೇತ್ರದ ಸದಸ್ಯ ಸಂಜಯ ಹಣಬರ, ಶಿಕ್ಷಕರನ್ನು ಬೇರೆಡೆಗೆ ನಿಯೋಜನೆ ಮಾಡಲಾಗುತ್ತಿದೆ ಎಂದು ದೂರಿದ್ದರು.
ಕಳೆದ ಬಾರಿಯ ಅಡಿಕೆ ಕೊಳೆರೋಗ ಪರಿಹಾರ ಹಲವು ಬೆಳೆಗಾರರಿಗೆಸಿಕ್ಕಿಲ್ಲಎಂದು ನಾಮ ನಿರ್ದೇಶಿತ ಸದಸ್ಯ ನಾಗರಾಜ್ ನಾರ್ವೇಕರ್ ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಶಶಿಕಾಂತ್ ಕೋಟಿಮನಿ, ಆಧಾರ್ ಜೋಡಣೆಯಲ್ಲಿ ಸಮಸ್ಯೆಯಿದೆ. ಶೀಘ್ರವೇ ಸರಿಪಡಿಸಲಾಗುವುದು ಎಂದರು.
ಕ್ರಮ ಕೈಗೊಳ್ಳಲು ಸೂಚನೆ:ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಕೈಗೊಂಡ ಕಾಮಗಾರಿಗಳಿಗೆ ಸಮಯದಲ್ಲಿ ಹಣ ಪಾವತಿಯಾಗುತ್ತಿಲ್ಲ ಎಂದು ಶಾಸಕ ದಿನಕರ ಶೆಟ್ಟಿ ದೂರಿದರು.
ಈ ಬಗ್ಗೆತಹಶೀಲ್ದಾರರಿಗೆ ಸೂಚನೆ ನೀಡಿದ ಸಚಿವ ದೇಶಪಾಂಡೆ, ‘ಕಡತ ವಿಲೇವಾರಿ ಮಾಡದಿರುವ ಕ್ರಮ ಸರಿಯಲ್ಲ. ಇದರಿಂದ ಕಾಮಗಾರಿಯ ವೆಚ್ಚ ಜಾಸ್ತಿಯಾಗುತ್ತದೆ. ಕಾಮಗಾರಿಗಳ ಪಟ್ಟಿ ಮಾಡಿ. ಕೆಲಸ ಪೂರ್ಣಗೊಂಡ 16 ದಿನಗಳಲ್ಲಿ ಹಣ ಪಾವತಿಯಾಗಬೇಕು. ಕೆಲಸ ಆಗಲಿಲ್ಲ ಎಂದಾದರೆ ನೋಟಿಸ್ ಕೊಡಿ’ ಎಂದರು.
ಶಾಸಕರಾದ ದಿನಕರ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ವೇದಿಕೆಯಲ್ಲಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.