ಶಿರಸಿ: ‘ಜಾತೀಯೆ, ಅಸ್ಪೃಶ್ಯತೆ ತುಂಬಿದ್ದ ಸಮಾಜದಲ್ಲಿ ಪಿಡುಗು ಹೋಗಲಾಡಿಸಿ ಸಮಾನತೆಯ ಸಂದೇಶ ಸಾರುವ ಮೂಲಕ ಪರಿಣಾಮಕಾರಿ ಪರಿವರ್ತನೆ ತಂದ ಕೀರ್ತಿ ಬ್ರಹ್ಮಶ್ರೀ ನಾರಾಯಣಗುರು ಅವರಿಗೆ ಸಲ್ಲಬೇಕು’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿ ಉತ್ಸವದಲ್ಲಿ ಅವರು ಮಾತನಾಡಿದರು.
‘ಸಮಾಜ ಮುಖಿ ಕೆಲಸ ಮಾಡುವವರಿಗೆ ನಾರಾಯಣಗುರು ಅವರು ಬಹುದೊಡ್ಡ ಪ್ರೇರಣೆ. ಬ್ರಿಟೀಷರ ಆಡಳಿತದ ಅವಧಿಯಲ್ಲಿ ಸಂಕಷ್ಟಗಳನ್ನು ಮೆಟ್ಟಿ ನಿಂತು ಸಮಾಜಕ್ಕೆ ಸಮಾನತೆಯ ಮಾರ್ಗದರ್ಶನ ತೋರಿದ್ದರು’ ಎಂದರು.
ಉಪನ್ಯಾಸ ನೀಡಿದ ಉಪನ್ಯಾಸಕ ಉಮೇಶ ನಾಯ್ಕ, ‘18ನೇ ಶತಮಾನದ ವೇಳೆಗೆ ಕೇರಳದಲ್ಲಿದ್ದ ಜಾತೀಯತೆ, ಅಸಮಾನತೆಯ ಪಿಡುಗು ನಿವಾರಣೆಗೆ ನಾರಾಯಣಗುರು ಅವರು ಕೈಗೊಂಡಿದ್ದ ಜಾಗೃತಿ ಇಡೀ ದೇಶದಲ್ಲಿ ಪರಿಣಾಮ ಬೀರಿತು. ಇಂದು ಸಮಾನತೆಯ ಜಾಗೃತಿ ಮೂಡಿದ್ದರೆ ಅದು ಬ್ರಹ್ಮಶ್ರೀ ಕೊಡುಗೆ’ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ನಾಮಧಾರಿ ಸಮಾಜದ ಪ್ರಮುಖ ಭೀಮಣ್ಣ ನಾಯ್ಕ ಮಾತನಾಡಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಉಪವಿಭಾಗಾಧಿಕಾರಿ ದೇವರಾಜ ಆರ್., ತಹಶೀಲ್ದಾರ್ ಶ್ರೀಧರ ಮುಂದಲಮನಿ, ಪೌರಾಯುಕ್ತ ಕೇಶವ ಚೌಗುಲೆ, ತಾಲ್ಲೂಕು ಪಂಚಾಯ್ತಿ ಇಒ ದೇವರಾಜ ಹಿತ್ತಲಮಕ್ಕಿ, ಡಿಎಸ್ಪಿ ರವಿ ನಾಯ್ಕ, ಗಣಪತಿ ನಾಯ್ಕ ಇದ್ದರು.
ಮಾರಿಕಾಂಬಾ ದೇವಾಲಯದಿಂದ ನಾರಾಯಣ ಗುರುಗಳ ಭಾವಚಿತ್ರದ ಆಕರ್ಷಕ ಮೆರವಣಿಗೆ ನಡೆಯಿತು. ನೂರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.