ಶಿರಸಿ: ಕರ್ನಾಟಕ ರಾಜ್ಯ ಅಂಚೆ ಇಲಾಖೆ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ದೀನ್ ದಯಾಳ್ ಸ್ಪರ್ಶ ಯೋಜನೆಯಡಿ ನಡೆದ ಅಂಚೆಚೀಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಶಿರಸಿ ಅಂಚೆ ವಿಭಾಗದಿಂದ 22 ಮಕ್ಕಳು ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜ್ಯ ಮಟ್ಟದಲ್ಲಿ ಶಿರಸಿ ಅಂಚೆ ವಿಭಾಗ ಪ್ರಥಮ ಸ್ಥಾನ ಪಡೆದಿದೆ. ಸತತ ಮೂರನೇ ಬಾರಿಗೆ ಈ ವಿಭಾಗ ಉತ್ತಮ ಸಾಧನೆ ಮಾಡಿದೆ.
ಆಯ್ಕೆಯಾಗಿರುವ ಪ್ರತಿ ವಿದ್ಯಾರ್ಥಿಗೆ ₹ 6000 ವಿದ್ಯಾರ್ಥಿವೇತನ ದೊರೆಯಲಿದೆ. ವಿದ್ಯಾರ್ಥಿಗಳು ಈ ಸಾಧನೆ ಮಾಡಲು ಮಾಜಿ ಸೈನಿಕರೂ ಆಗಿರುವ ಅಂಚೆ ಇಲಾಖೆ ಅಧಿಕಾರಿ (ಪ್ರಸ್ತುತ ನಿವೃತ್ತಿ ಹೊಂದಿರುವ) ರಾಮು ಇ, ಅಂಚೆಚೀಟಿ ಸಂಗ್ರಹಕಾರರಾದ ವಿ.ಎಸ್.ಹೆಗಡೆ, ನರಸಿಂಹಮೂರ್ತಿ ವಿಶೇಷ ತರಬೇತಿ ನೀಡಿದ್ದರು. ‘2017ರಿಂದ 2020ರವರೆಗೆ ಸತತವಾಗಿ ಅತಿಹೆಚ್ಚು ವಿದ್ಯಾರ್ಥಿಗಳು ವಿಭಾಗದಿಂದ ಆಯ್ಕೆಯಾಗಿದ್ದಾರೆ’ ಎಂದು ರಾಮು ತಿಳಿಸಿದ್ದಾರೆ.
ತಾಲ್ಲೂಕಿನ ಇಸಳೂರು ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳಾದ ಅವ್ಯಕ್ತ ಹೆಗಡೆ, ಅಖಿಲ್ ಕಂಚುಗಾರ, ಸುಘೋಷ್ ಜೋಶಿ, ನವ್ಯಶ್ರೇಯಾ ಪಿ.ಆರ್, ಧ್ರುವ ಹೆಗಡೆ, ಪುನೀತ್ ಆರ್, ಅಕ್ಷಯ ಭಟ್ಟ, ತನ್ಮಯ ವನಿಷ್ಠ, ಸುಜಯ್ ಭಟ್ ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ.