ಶಿರಸಿ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಾಗರಿಕ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಶನಿವಾರ ಇಲ್ಲಿ ಕರೆದಿದ್ದ ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು.
ಶಿವಾಜಿ ಚೌಕದಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಮಾಜಗುಡ್ಡದಲ್ಲಿ ಸಮಾಪ್ತಿಗೊಂಡಿತು. ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, ‘ಕಾಯ್ದೆ ತಿದ್ದುಪಡಿ ತರುವ ಮೂಲಕ ದೀನ ದಲಿತರು, ತಳ ಸಮುದಾಯದ ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡಿ, ಮತ್ತೆ ಅಧಿಕಾರಕ್ಕೆ ಬರುವುದು ಕೇಂದ್ರ ಸರ್ಕಾರದ ತಂತ್ರವಾಗಿದೆ. ಅಸ್ಸಾಂನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಎನ್ಆರ್ಸಿ ದೋಷಗಳಿಂದ ಕೂಡಿದ್ದು ಎಲ್ಲರಿಗೂ ತಿಳಿದಿದೆ. ಈ ನಡುವೆಯೇ ಇದನ್ನು ಇಡೀ ದೇಶಕ್ಕೆ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ’ ಎಂದು ಆರೋಪಿಸಿದರು.
ದೇಶ ಕಟ್ಟಲು ಎಲ್ಲ ಸಮುದಾಯದವರ ಪಾತ್ರವಿದೆ. ಹೀಗಿರುವ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಲು ಸರ್ಕಾರ ಎನ್ಆರ್ಸಿ, ಸಿಎಎ ಜಾರಿಗೊಳಿಸಲು ಹೊರಟಿರುವ ಕ್ರಮ ಸರಿಯಲ್ಲ. ಇದರ ವಿರುದ್ಧ ಜಾತಿ, ಧರ್ಮ ಮೀರಿದ ಹೋರಾಟ ನಡೆಯಬೇಕು. ಸಮಾಜದಲ್ಲಿನ ಶಾಂತಿ ಕದಡಲು ರಾಜಕೀಯದ ಬಳಕೆ ಆಗಬಾರದು ಎಂದು ಹೇಳಿದರು.