ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಎರಡು ವಾರದಿಂದ ಗೋವಿನ ಜೋಳದ ಬೆಳೆಗಾರರು ಉತ್ಪನ್ನವನ್ನು ಪ್ರಾಂಗಣಕ್ಕೆ ತಂದು ಬಿಸಿಲಿನಲ್ಲಿ ಒಣಗಿಸಿ, ಶುಚಿಗೊಳಿಸಿ, ಮಾರಾಟಕ್ಕೆಂದು ಮೂಟೆಗಳಲ್ಲಿ ತುಂಬಿಟ್ಟಿದ್ದರು. ಮಾರಾಟಕ್ಕೆ ಸಿದ್ಧಪಡಿಸಿದ್ದ ಗೋವಿನ ಜೋಳವನ್ನು ಮಳೆಯಿಂದ ರಕ್ಷಿಸಲು ತಾಡಪತ್ರೆ ಮತ್ತಿತರ ಸಲಕರಣೆಗಳಿಂದ ಮುಚ್ಚಿದ್ದರು. ಆದರೆ, ಪ್ರತಿದಿನ ಸಂಜೆ ಮಳೆಯಾಗುತ್ತಿರುವುದರಿಂದ ಎಪಿಎಂಸಿ ಪ್ರಾಂಗಣದಲ್ಲಿ ನೀರು ನಿಂತು ರೈತರ ಉತ್ಪನ್ನ ನೀರಿನಲ್ಲಿ ನೆನೆದಿದೆ. ಒಣ ಹಾಕಿದ್ದ ಜೋಳ ತೇಲಿ ಹೋಗಿದೆ.