ಕಾರವಾರ: ಕಾರ್ಮಿಕ ಇಲಾಖೆಯಿಂದ ಜನರಿಗೆ ದೊರೆಯುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲು ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್ ಆಯೋಜಿಸಿರುವ ರೋಲರ್ ಸ್ಕೇಟಿಂಗ್ ಯಾತ್ರೆಗೆ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ದೊರೆಯಿತು.
ಜಿಲ್ಲಾ ಪಂಚಾಯ್ತಿ ಸಿಇಒ ಎಂ.ಪ್ರಿಯಾಂಗಾ ಯಾತ್ರೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ‘ಸದುದ್ದೇಶದಿಂದ ಕೈಗೊಂಡಿರುವ ಯಾತ್ರೆ ಯಶಸ್ವಿಯಾಗಲಿ. ಜಾಗೃತಿ ಜೊತೆಗೆ ಮಕ್ಕಳಿಗೂ ಹೊಸತನದ ಅನುಭವ ದೊರೆಯುತ್ತಿದೆ’ ಎಂದರು.
ಉತ್ತರ ಕನ್ನಡದ 25 ಮಂದಿ ಸೇರಿದಂತೆ ಒಟ್ಟೂ 40 ಪಟುಗಳು ಕಾರವಾರದಿಂದ ಬೆಂಗಳೂರಿನವರೆಗೆ 610 ಕಿ.ಮೀ. ದೂರವನ್ನು ಸ್ಕೇಟಿಂಗ್ ಮಾಡುತ್ತ 6 ದಿನಗಳಲ್ಲಿ ಕ್ರಮಿಸಲಿದ್ದಾರೆ. ಕಾರ್ಮಿಕ ಇಲಾಖೆಯಿಂದ ಜನರಿಗೆ ಸಿಗುವ ಸೌಲಭ್ಯಗಳ ಕುರಿತ ಮಾಹಿತಿ ಫಲಕಗಳನ್ನು ಹಿಡಿದು ನಗರದಲ್ಲಿಯೂ ಸ್ಕೇಟಿಂಗ್ ಮಾಡುತ್ತ ಮಕ್ಕಳು ಸಾಗಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಜಿಲ್ಲಾ ಕಾರ್ಮಿಕ ಅಧಿಕಾರಿ ಅಕ್ಬರ್ ಮುಲ್ಲಾ ಇದ್ದರು.