ಕಾರವಾರ: ಎಸ್ಸೆಸ್ಸೆಲ್ಸಿಯ ತೃತೀಯ ಭಾಷಾ ಪರೀಕ್ಷೆ ಶುಕ್ರವಾರ ನೆರವೇರಿತು. ಇದರೊಂದಿಗೆ ಎಲ್ಲ ಪರೀಕ್ಷೆಗಳೂ ನಿರಾತಂಕವಾಗಿ ಮುಕ್ತಾಯವಾದವು. ಶೈಕ್ಷಣಿಕ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೇ ಅಧಿಕಾರಿಗಳು ಹಾಗೂ ಪಾಲಕರು ನಿಟ್ಟುಸಿರು ಬಿಟ್ಟರು.
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಲವು ಪೋಷಕರುಒಲವು ತೋರಿಸಿರಲಿಲ್ಲ. ಆದರೆ,ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ತಾವು ಕೈಗೊಂಡ ಸುರಕ್ಷತಾ ಕ್ರಮಗಳನ್ನು ತಿಳಿಸಿದ್ದರು. ಅಲ್ಲದೇ ಪರೀಕ್ಷಾ ಕೇಂದ್ರಗಳಿಗೆ ಪಾಲಕರನ್ನೂ ಕರೆದುಕೊಂಡು ಹೋಗಿ ವಿವರಿಸಿದ್ದರು. ಪಾಲಕರುಒಲ್ಲದ ಮನಸ್ಸಿನಿಂದಲೇ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿದ್ದರು.
‘ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಲು ಶಿಕ್ಷಕರ ಶ್ರಮ ಮುಖ್ಯ ಕಾರಣ. ಅವರು ಮನೆ ಮನೆಗೆ ತೆರಳಿವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ. ಇದರ ಪರಿಣಾಮವಾಗಿ ಪರೀಕ್ಷೆಗೆ ಈ ವರ್ಷಗೈರು ಹಾಜರಾದವರ ಪ್ರಮಾಣ ಕಳೆದ ವರ್ಷಕ್ಕಿಂತ ಕಡಿಮೆಯಿದೆ’ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹರೀಶ ಗಾಂವ್ಕರ್ ಸಂತಸ ವ್ಯಕ್ತಪಡಿಸಿದರು.
‘ಭಟ್ಕಳದ ಉತ್ತರಕೊಪ್ಪದ ಬಾಲಕಿಯೊಬ್ಬಳು ಸಾಗರ ತಾಲ್ಲೂಕಿನ ಸಂಬಂಧಿಕರ ಮನೆಗೆ ಹೋಗಿ ಉಳಿದುಕೊಂಡಿದ್ದಳು.ಅಲ್ಲಿ ಮೊಬೈಲ್ ಸಂಪರ್ಕ ಕೂಡ ಸಾಧ್ಯವಾಗಿರಲಿಲ್ಲ. ಅಂತಹ ಜಾಗಕ್ಕೂ ಶಿಕ್ಷಕರು ತೆರಳಿ ಪರೀಕ್ಷೆಗೆ ಹಾಜರಾಗುವಂತೆ ಮನವೊಲಿಸಿ ಪರೀಕ್ಷೆ ಬರೆಸಿದ್ದಾರೆ. ಇಂತಹ ಹಲವು ಉದಾಹರಣೆಗಳಿವೆ’ ಎಂದು ಅವರು ನೆನಪಿಸಿಕೊಂಡರು.
‘ನಮ್ಮ ಇಲಾಖೆಯೊಂದಿಗೆ ರಾಜ್ಯ ರಸ್ತೆ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯ ಸಹಕರಿಸಿದ್ದರಿಂದ ಪರೀಕ್ಷೆ ಸುಗಮವಾಗಿ ನೆರವಾಗಿದೆ. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಮತ್ತು ಪುನಃ ಕರೆದುಕೊಂಡು ಹೋಗಲು ಏನೇ ಸಮಸ್ಯೆಯಾದರೂ ಅವರು ಆಕ್ಷೇಪವೆತ್ತದೇ ಜೊತೆಗಿದ್ದರು’ ಎಂದು ಹೇಳಿದರು.
ಶೈಕ್ಷಣಿಕ ಜಿಲ್ಲೆಯಲ್ಲಿ 58 ವಿದ್ಯಾರ್ಥಿಗಳು ಕಂಟೈನ್ಮೆಂಟ್ ವಲಯದಿಂದ ಬಂದು ಪರೀಕ್ಷೆಗೆ ಬರೆದಿದ್ದಾರೆ. ಶುಕ್ರವಾರ ಮಾತ್ರ ಒಬ್ಬ ವಿದ್ಯಾರ್ಥಿ ಅನಾರೋಗ್ಯದಿಂದಾಗಿ ಪ್ರತ್ಯೇಕ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆದನು.ಉಳಿದಂತೆ ಯಾರಿಗೂ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳಲಿಲ್ಲ. ಇದು ಸಹ ಅಧಿಕಾರಿಗಳು ಮತ್ತು ಪರೀಕ್ಷಾ ಕೊಠಡಿಯ ಕರ್ತವ್ಯದಲ್ಲಿದ್ದವರ ಚಿಂತೆಯನ್ನು ದೂರ ಮಾಡಿತು.
ಸಚಿವರ ಶ್ಲಾಘನೆ: ಕುಮಟಾ ತಾಲ್ಲೂಕಿನ ಯಾಣ ರಸ್ತೆಗೆ ಶುಕ್ರವಾರ ಬೆಳಿಗ್ಗೆ ಮರವೊಂದು ಮುರಿದು ಬಿದ್ದಿತ್ತು. ಇದರಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯ ಬಸ್ ಸಂಚರಿಸಲು ಸಾಧ್ಯವಿರಲಿಲ್ಲ.
ಬಸ್ನಿಂದ ಕೆಳಗಿಳಿದಚಾಲಕ ಜಗದೀಶ ಪಟಗಾರ ಹಾಗೂನಿರ್ವಾಹಕ ಭಾಸ್ಕರ ಪಟಗಾರ, ಮರವನ್ನು ಕಡಿದು ಬದಿಗೆ ಸರಿಸಿದರು.ಬಳಿಕ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರತಲುಪುವಂತೆ ನೋಡಿಕೊಂಡರು. ಈ ವಿಚಾರವು ಶಿಕ್ಷಣ ಸಚಿವ ಸುರೇಶ ಕುಮಾರ್ ಅವರ ಗಮನಕ್ಕೂ ಬಂದಿದ್ದು, ಸಾಮಾಜಿಕ ಜಾಲತಾಣಗಳ ತಮ್ಮ ಖಾತೆಗಳಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ತೃತೀಯ ಭಾಷಾ ಪರೀಕ್ಷೆ: ಕಾರವಾರ ಶೈಕ್ಷಣಿಕ ಜಿಲ್ಲೆಯ ಅಂಕಿ ಅಂಶ
* ನೋಂದಾಯಿಸಿದ ವಿದ್ಯಾರ್ಥಿಗಳು-9,423
* ಪರೀಕ್ಷೆಗೆ ಹಾಜರಾದವರು-9,074
* ಕಂಟೈನ್ಮೆಂಟ್ ಪ್ರದೇಶದ ವಿದ್ಯಾರ್ಥಿಗಳು-51
* ಪರೀಕ್ಷೆಗೆ ಗೈರು ಹಾಜರಾದವರು-349
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.