ಶಿರಸಿ: ಸಂಸ್ಥೆಯ ಸದಸ್ಯರಿಗೆ, ಗ್ರಾಹಕರಿಗೆ ಒಂದೇ ಸೂರಿನಡಿ ಅಗತ್ಯ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಒದಗಿಸುವ ನಿಟ್ಟಿನಲ್ಲಿ ‘ಸುಪರ್ ಮಾರ್ಟ್’ ಆರಂಭಿಸಲಾಗುತ್ತಿದ್ದು, ಜು.27ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ತಾಲ್ಲೂಕಾ ಮಾರ್ಕೆಟಿಂಗ್ ಸೊಸೈಟಿ (ಟಿ.ಎಂ.ಎಸ್.) ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಅಂದು ಬೆಳಿಗ್ಗೆ 11 ಗಂಟೆಗೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸುಪರ್ ಮಾರ್ಟ್ನ್ನು, ಸಚಿವ ಶಿವರಾಮ ಹೆಬ್ಬಾರ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಗಣಪತಿ ನಾಯ್ಕ, ಎಂ.ಆರ್.ಕುಲಕರ್ಣಿ, ವಿಜಯಲಕ್ಷ್ಮೀ ನುಗ್ಗೆಹಳ್ಳಿ, ನಿಂಗರಾಜು ಎಸ್. ಪಾಲ್ಗೊಳ್ಳುವರು’ ಎಂದು ತಿಳಿಸಿದರು.
‘ಎಂಟು ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಸಂಸ್ಥೆ ರೈತರ ಕ್ಷೇಮ, ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಕೃಷಿಕರಿಗೆ ಕಾಲಕಾಲಕ್ಕೆ ನೆರವಾಗುತ್ತ ಬರಲಾಗಿದ್ದು, ಅವರ ಅಭಿಪ್ರಾಯದಂತೆ ಹೊಸ ಸೇವೆ ಆರಂಭಿಸಲಾಗುತ್ತಿದೆ’ ಎಂದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಎಂ.ಎ.ಹೆಗಡೆ, ‘ದಿನಸಿ, ಹಣ್ಣು, ತರಕಾರಿ, ಸ್ಟೇಷನರಿ, ಪಾತ್ರೆ, ಆಟಿಕೆ, ಪಠ್ಯಪುಸ್ತಕ, ಅಲಂಕಾರಿಕ ಉಪಕರಣಗಳು ಲಭ್ಯವಿರಲಿವೆ. ಆರಂಭಿಕ ದಿನದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರ ನೀಡಲಾಗುವುದು. ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಮಾರುಕಟ್ಟೆ ವಿಸ್ತರಣೆಯಾಗಲಿದೆ’ ಎಂದರು.
‘ಕಳೆದ ಆರ್ಥಿಕ ವರ್ಷಕ್ಕೆ ಸಂಸ್ಥೆ ₹1.05 ಕೋಟಿ ನಿವ್ವಳ ಲಾಭ ಗಳಿಸಿದೆ. ₹286 ಕೋಟಿಗೂ ಹೆಚ್ಚು ವಹಿವಾಟು ನಡೆಸಲಾಗಿದೆ’ ಎಂದು ತಿಳಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಎಂ.ಪಿ.ಹೆಗಡೆ ಹೊನ್ನೆಕಟ್ಟಾ, ನಿರ್ದೇಶಕರಾದ ಜಿ.ಎಂ.ಹೆಗಡೆ ಮುಳಖಂಡ, ಎನ್.ಡಿ.ಹೆಗಡೆ, ಆರ್.ಎಸ್.ಹೆಗಡೆ ಇದ್ದರು.