ಶಿರಸಿ: ‘ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಟೈಲರ್ಗಳ ಸಮಸ್ಯೆಯನ್ನು ಯಾರೂ ಆಲಿಸುತ್ತಿಲ್ಲ. ನಮ್ಮನ್ನು ಸಂಘಟಿತ ಕಾರ್ಮಿಕರನ್ನಾಗಿ ಪರಿಗಣಿಸಿ ನೋವಿಗೆ ಸ್ಪಂದಿಸಬೇಕು’ ಎಂದು ವಿನಂತಿಸಿ, ತಾಲ್ಲೂಕು ಟೈಲರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಶುಕ್ರವಾರ ಇಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಿದರು.
‘ಸಂಘವು ತಾಲ್ಲೂಕಿನಲ್ಲಿ 226 ಸದಸ್ಯರನ್ನು ಹೊಂದಿದೆ. ಟೈಲರ್ ಕುಟುಂಬದ ಸಮಸ್ಯೆ ಹೇಳತೀರದಾಗಿದೆ. ನಮ್ಮ ಸಂಘದಲ್ಲಿ ಶೇ 95ರಷ್ಟು ಸದಸ್ಯರು ಬಿಪಿಎಲ್ ಕಾರ್ಡ್ ಹೊಂದಿದವರು. ಬಡತನದಲ್ಲಿ ಜೀವನ ನಡೆಸುವ ನಮ್ಮನ್ನು ಸಂಘಟಿತ ಕಾರ್ಮಿಕರೆಂದು ಪರಿಗಣಿಸಿ, ಸರ್ಕಾರದ ಸೌಲಭ್ಯಗಳನ್ನು ನೀಡಬೇಕು’ ಎಂದು ಸಂಘದ ಅಧ್ಯಕ್ಷ ರಮೇಶ ದಿವಾಕರ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಕಾಗೇರಿ, ಟೈಲರ್ಗಳ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು, ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಹ ಕಾರ್ಯದರ್ಶಿ ಕಿಶೋರ ನೇತ್ರೇಕರ, ಅರ್ಜುನ್ ಸರ್ವದೆ, ಪದ್ಮಾ ಟೈಲರ್ ಇದ್ದರು.