ಶಿರಸಿ: ಇಲ್ಲಿನ ಯಕ್ಷಸಂಭ್ರಮ ಟ್ರಸ್ಟ್ನಿಂದ ಐದನೇವರ್ಷದ ತಾಳಮದ್ದಲೆ ಸಪ್ತಾಹವು ಅ.13ರಿಂದ 19ರವರೆಗೆ ಟಿ.ಎಂ.ಎಸ್. ಸಭಾಭವನದಲ್ಲಿ ನಡೆಯಲಿದೆ. ಈ ವೇಳೆ ಪ್ರತಿಷ್ಠಿತ ದಿ.ಚಂದು ಬಾಬು ಪ್ರಶಸ್ತಿಯನ್ನು ಪ್ರಾಚಾರ್ಯ ಕೆ.ಪಿ.ಹೆಗಡೆ ಗೋಳಗೋಡ ಅವರಿಗೆಪ್ರದಾನ ಮಾಡಲಾಗುವುದು.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಟ್ರಸ್ಟ್ ಅಧ್ಯಕ್ಷ ಎಂ.ಎ.ಹೆಗಡೆ ದಂಟ್ಕಲ್, ‘ನೆಬ್ಬೂರು ನಾರಾಯಣ ಭಾಗವತ ಅವರ ಸಂಸ್ಮರಣೆಗೆ ಅರ್ಪಿಸುವಸ್ಮೃತಿ ಗೌರವ ಈ ತಾಳ ಮದ್ದಲೆ ಸಪ್ತಾಹವಾಗಿದೆ. ಏಳುದಿನವೂಸಂಜೆ 4ರಿಂದತಾಳಮದ್ದಲೆ ನಡೆಯಲಿದೆ’ ಎಂದರು.
ಅ.13ರಂದು ಸಂಜೆ 4ಕ್ಕೆ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ. ಪ್ರಸಿದ್ಧ ಅರ್ಥದಾರಿ ಡಾ.ಎಂ.ಪ್ರಭಾಕರ ಜೋಶಿ ಮಂಗಳೂರು ಉದ್ಘಾಟಿಸಲಿದ್ದಾರೆ. ಟಿ.ಎಂ.ಎಸ್. ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಪ್ತಾಹದ ಮೊದಲ ದಿನ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ರುಕ್ಮಾಂಗದ ಚರಿತ್ರೆ’ ತಾಳಮದ್ದಲೆ ಪ್ರಸಂಗ ಹಮ್ಮಿಕೊಳ್ಳಲಾಗುವುದು. ಎರಡು ಮತ್ತು ಮೂರನೇ ದಿನ ಜಾನಕೈ ತಿಮ್ಮಪ್ಪ ಹೆಗಡೆ ವಿರಚಿತ ‘ಸತ್ಯಪರೀಕ್ಷೆ’, ‘ಸತ್ಯ ಸಾಕ್ಷಾತ್ಕಾರ’, ನಾಲ್ಕನೇ ದಿನ ಪಾರ್ತಿಸುಬ್ಬ ವಿರಚಿತ ‘ಚೂಡಾಮಣಿ’, ಐದನೇ ದಿನ ಕಾನಗೋಡು ಬಿಷ್ಟಪ್ಪ ಕವಿ ‘ಮಾಗಧವಧೆ’, ಆರನೇಯ ದಿನ ದೇವಿದಾಸ ಕವಿ ವಿರಚಿತ ‘ಸಮರಸನ್ನಾಹ’ ಹಾಗೂ ಏಳನೇ ದಿನ ದೇವಿದಾಸ ಕವಿ ಮತ್ತು ಗಣೇಶ ಕೊಲೆಕ್ಕಾಡಿ ವಿರಚಿತ ‘ಭೀಷ್ಮಾವಸಾನ’ ಪ್ರಸಂಗಗಳನ್ನು ಪ್ರಸ್ತುತಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರ, ವಿದ್ವಾನ್ ಗಣಪತಿ ಭಟ್ಟ, ಕೇಶವ ಹೆಗಡೆ ಕೊಳಗಿ, ಅನಂತ ಹೆಗಡೆ ದಂತಳಿಗೆ, ರಾಮಕೃಷ್ಣ ಹೆಗಡೆ ಹಿಲ್ಲೂರು, ರವಿಚಂದ್ರ ಕನ್ನಡಿಕಟ್ಟೆ ಪಾಲ್ಗೊಳ್ಳುವರು. ಮದ್ದಳೆವಾದಕರಾಗಿ ಶಂಕರ ಭಾಗ್ವತ ಯಲ್ಲಾಪುರ, ಎ.ಪಿ.ಪಾಠಕ್, ಎನ್.ಜಿ.ಹೆಗಡೆ ಯಲ್ಲಾಪುರ, ನರಸಿಂಹ ಭಟ್ಟ, ಚೈತನ್ಯ ಪದ್ಯಾಣ ಭಾಗವಹಿಸುವರು. ವಿಘ್ನೇಶ್ವರ ಕೆಸರಕೊಪ್ಪ, ಪ್ರಸನ್ನ ಭಟ್ಟ ಹೆಗ್ಗಾರ, ಪ್ರಮೋದ ಕಬ್ಬಿನಗದ್ದೆ ಚಂಡೆ ವಾದನ ಮಾಡಲಿದ್ದಾರೆ.
ಮುಮ್ಮೇಳದಲ್ಲಿ ಅರ್ಥದಾರಿಗಳಾಗಿ ಡಾ.ಎಂ.ಪ್ರಭಾಕರ ಜೋಶಿ, ಉಮಾಕಾಂತ ಭಟ್ಟ, ವಿದ್ವಾನ್ ಹಿರಣ್ಯ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ವಾಸುದೇವ ಭಟ್ಟ, ಪ್ರೊ.ಎಂ.ಎನ್.ಹೆಗಡೆ, ವಿ.ಶೇಷಗಿರಿ ಭಟ್ಟ, ಪ್ರೊ.ಎಂ.ಎ.ಹೆಗಡೆ, ವಿದ್ವಾನ್ ಗಣಪತಿ ಭಟ್ಟ, ವಿದ್ವಾನ್ ವಿನಾಯಕ ಭಟ್ಟ, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಗಣೇಶ ಶೆಟ್ಟಿ, ವಾದಿರಾಜ ಕಲ್ಲೂರಾಯ, ಪ್ರೊ.ಪವನ ಕಿರಣಕೆರೆ, ಶ್ರೀಧರ ಹೆಗಡೆ ಚಪ್ಪರಮನೆ, ಸುಬ್ರಾಯ ಹೆಗಡೆ, ವಿ.ರಾಮಚಂದ್ರ ಭಟ್ಟ, ಪದ್ಮನಾಭ ಅರೆಕಟ್ಟಾ, ವಿ.ಬಾಲಚಂದ್ರ ಭಟ್ಟ, ಶ್ರೀನಿವಾಸ ಮತ್ತಿಘಟ್ಟ, ಮಂಜುನಾಥ ಸಾಗರ, ಸಂದೇಶ ಚಪ್ಪರಮನೆ, ಡಾ.ಜಿ.ಎಲ್.ಹೆಗಡೆ, ಮೋಹನ ಹೆಗಡೆ, ರವಿರಾಜ ಪನೆಯಾಲ, ದಿವಾಕರ ಕೆರೆಹೊಂಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
‘ದಿ.ಚಂದು ಬಾಬು ಪ್ರಶಸ್ತಿ’:ಸಿದ್ದಾಪುರ ತಾಲ್ಲೂಕಿನ ಗೊಳಗೋಡ ಗ್ರಾಮದ ಕೆ.ಪಿ.ಭಾಗ್ವತ್ ನೆಬ್ಬೂರ ಅವರ ಪ್ರಮುಖ ಶಿಷ್ಯರಲ್ಲೊಬ್ಬರು. ಬಹಳ ಕಾಲದವರೆಗೆ ಬೇರೆ ಬೇರೆ ಮೇಳಗಳಲ್ಲಿದ್ದು, ಈಗ ತೆಕ್ಕಟ್ಟೆ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಭಾಗವತಿಕೆಯನ್ನು ಕಲಿಸುತ್ತಿದ್ದಾರೆ.ನಾಲ್ಕುದಶಕಗಳಿಂದ ಭಾಗವತಿಕೆ ಮಾಡಿದ ಅವರು ಈಗ ನಿವೃತ್ತಿ ಹೊಂದಿದ್ದಾರೆ. ಹಾಡುಗಾರಿಕೆಯಲ್ಲಿ ಪ್ರಸಿದ್ಧ ಹೆಸರು ಅವರದ್ದಾಗಿದ್ದು, ಈ ವರ್ಷದ ‘ದಿ.ಚಂದು ಬಾಬು ಪ್ರಶಸ್ತಿ’ಯನ್ನು ಅವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ಎಂ.ಎ.ಹೆಗಡೆ ತಿಳಿಸಿದರು.
ಈ ವೇಳೆ ಪ್ರಮುಖರಾದ ಸೀತಾರಾಮ ಚಂದು, ಎಸ್.ಜಿ.ಹೆಗಡೆ ಊರತೋಟ, ಎಂ.ವಿ.ಹೆಗಡೆ ಅಮ್ಮಿಚಿಮನೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.