ಜೋಯಿಡಾ (ಉತ್ತರ ಕನ್ನಡ): ತಾಲ್ಲೂಕಿನ ಗಣೇಶಗುಡಿ ಸಮೀಪ ಕಾಳಿ ನದಿಯಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ಕರೆದೊಯ್ಯುತ್ತಿದ್ದ ರಿವರ್ ರ್ಯಾಫ್ಟಿಂಗ್ ಬೋಟ್ ಗುರುವಾರ ಮುಳುಗಡೆಯಾಗಿದ್ದು, ಅದರಲ್ಲಿದ್ದ ಮಕ್ಕಳೂ ಸೇರಿದಂತೆ 12 ಮಂದಿ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಮುಳುಗುತ್ತಿದ್ದ ಬೋಟ್ನ್ನು ಸಮೀಪದಲ್ಲೇ ಇನ್ನೊಂದು ಬೋಟ್ನಲ್ಲಿದ್ದ ಪ್ರವಾಸಿಗರು ರಕ್ಷಿಸಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಪ್ರವಾಸಿಗರನ್ನು ರಕ್ಷಿಸುತ್ತಿರುವ ವಿಡಿಯೊ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಸಣ್ಣ ರ್ಯಾಫ್ಟಿಂಗ್ ಬೋಟ್ನಲ್ಲಿ ಗರಿಷ್ಠ 6 ಜನರನ್ನು ಕರೆದೊಯ್ಯಬಹುದಾಗಿದೆ. ಆದರೆ 12 ಜನರನ್ನು ಬೋಟ್ನಲ್ಲಿ ಕರೆದೊಯ್ಯಲಾಗಿತ್ತು. ಇದೇ ಅವಘಡಕ್ಕೆ ಕಾರಣ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
‘ಬೋಟ್ ಮುಳುಗಡೆ ಅವಘಡ ಗಮನಕ್ಕೆ ಬಂದಿದೆ. ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ. ಆಯೋಜಕರು ಯಾರು ಎಂಬುದನ್ನು ಖಚಿತಪಡಿಸಿಕೊಂಡು ಅವರ ಮೇಲೆ ಪ್ರಕರಣ ದಾಖಲಿಸುತ್ತೇವೆ’ ಎಂದು ರಾಮನಗರ ಎಸ್ಐ ವಿನೋದ್ ಎಸ್.ಕೆ. ತಿಳಿಸಿದ್ದಾರೆ.