‘ಕೋವಿಡ್ 19 ಸೋಂಕಿತ (ಪಿ–5652) ವ್ಯಕ್ತಿಯು ಖತಾರ್ ದೇಶದಿಂದ ಬೆಂಗಳೂರಿಗೆ ಬಂದು, ಅಲ್ಲಿ ಸರ್ಕಾರಿ ಕ್ವಾರಂಟೈನ್ ಮುಗಿಸಿ, ನೇರವಾಗಿ ಕಾರವಾರದಲ್ಲಿರುವ ಮನೆಗೆ ಹೋಗದೇ, ಖಾಸಗಿ ಬಸ್ನಲ್ಲಿ ಹುಬ್ಬಳ್ಳಿಗೆ ಬಂದು, ಅಲ್ಲಿಂದ ಸಾರಿಗೆ ಸಂಸ್ಥೆ ಬಸ್ನಲ್ಲಿ ಶಿರಸಿಗೆ ಬಂದಿದ್ದಾರೆ. ಈ ವ್ಯಕ್ತಿಯ ಸಂಬಂಧಿಯಾದ ಇಲ್ಲಿನ ಮುಸ್ಲಿಂಗಲ್ಲಿಯ ಮುಜಾಮಿಲ್ ನಜೀರ್ ಶೇಖ್, ಯಾವುದೇ ಸುರಕ್ಷತಾ ಸಾಧನ ಧರಿಸದೇ, ತಮ್ಮ ಮನೆಗೆ ಸೋಂಕಿತ ವ್ಯಕ್ತಿಯನ್ನು ಕರೆದೊಯ್ದಿದ್ದು, ನಂತರ ಅವರಿಬ್ಬರೂ ಶಿರಸಿಯಲ್ಲಿ ತಿರುಗಾಡಿದ್ದಾರೆ. ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ನಂತರ ಮೇ 31ರಂದು ಸೋಂಕಿತ ವ್ಯಕ್ತಿಯನ್ನು ಮುಜಾಮಿಲ್ ಕಾರಿನಲ್ಲಿ ಕಾರವಾರಕ್ಕೆ ಬಿಟ್ಟು ಬಂದಿದ್ದಾರೆ. ಈ ಮೂಲಕ ಸೋಂಕು ತಡೆಯುವಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.