ಕಾರವಾರ: ದೇಶದ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು, ಜುಲೈ 25ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಹೊನ್ನಾವರದ ಮಾಳ್ಕೋಡ ಗ್ರಾಮದ ಯುವತಿ ಚಿಂತನಾ ಹೆಗಡೆ, ಯಕ್ಷಗಾನ ಭಾಗವತಿಕೆಯ ಮೂಲಕ ಸ್ವಾಗತ ಕೋರಿದ್ದಾರೆ.
‘ಹೆಜ್ಜೆ ಇಟ್ಟಿಹಳು ದ್ರೌಪದಿ... ರಾಷ್ಟ್ರಪತಿಯ ಭವನದಲಿ... ಭಾರತ ಮಹಾಭಾರತವಾಗಲಿ... ಧರ್ಮರಾಯನ ನ್ಯಾಯಾಂಗ ಸಂವಿಧಾನವಿಹುದು... ಭೀಮ ಬಲದ ಸೇನಾಬಲವಿಹುದು..’ ಎಂದು ಯಕ್ಷಗಾನದ ಬಡಗುತಿಟ್ಟಿನ ಶೈಲಿಯಲ್ಲಿ ಗಾಯನ ಮಾಡಿದ್ದಾರೆ. ಉಡುಪಿಯ ಅರವಿಂದ ಚಿಪ್ಳೂಣ್ಕರ್ ಹಾಡನ್ನು ರಚಿಸಿದ್ದಾರೆ.
ಚಿಂತನಾ, ಮಾಳ್ಕೋಡಿನ ಯಕ್ಷಪಲ್ಲವಿ ಟ್ರಸ್ಟ್ ಮೇಳದಲ್ಲಿ ಐದು ವರ್ಷಗಳಿಂದ ಭಾಗವತಿಕೆ ಮಾಡುತ್ತಿದ್ದಾರೆ. ಈ ಹಾಡಿಗೆ ಅವರ ತಂದೆ ಉದಯ ಹೆಗಡೆ ಮಾಳ್ಕೋಡು ಮಾರ್ಗದರ್ಶನ ಮಾಡಿದ್ದಾರೆ. ಅವರ ಗಾಯನದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.