ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿದೆ 312 ವರ್ಷಗಳ ‘ಮಹಾಭಾರತ’!

ಕಾರವಾರ ಗ್ರಂಥಾಲಯದಲ್ಲಿ ಹಳೆಯ ಗ್ರಂಥ ಸಂರಕ್ಷಣೆ
Published 18 ಜುಲೈ 2023, 20:07 IST
Last Updated 18 ಜುಲೈ 2023, 20:07 IST
ಅಕ್ಷರ ಗಾತ್ರ

ಕಾರವಾರ: ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಆಗಾಗ ಅಪರೂಪದ ದೃಶ್ಯವೊಂದು ಕಾಣಲು ಸಿಗುತ್ತದೆ. ಹಸ್ತಪ್ರತಿ ಮಾದರಿಯ ಮುದ್ರಿತ ಗ್ರಂಥದ ಕಟ್ಟುಗಳನ್ನು ಬಿಚ್ಚಿ ಒಂದೊಂದೇ ಪುಟವನ್ನು ಎತ್ತಿಡುತ್ತಾ ವಿದ್ವಾಂಸರು ಅಧ್ಯಯನ ಮಾಡುವಂತಹ ದೃಶ್ಯವದು. ಗ್ರಂಥಾಲಯದಲ್ಲಿ 312 ವರ್ಷಗಳಷ್ಟು ಹಳೆಯದಾದ ಮತ್ತು ಸಂಸ್ಕೃತ ಭಾಷೆಯಲ್ಲಿರುವ ‘ಮಹಾಭಾರತ’ ಗ್ರಂಥವನ್ನು ಸಂರಕ್ಷಿಸಿ ಇಡಲಾಗಿದ್ದು ತನ್ನ ಆಕಾರ ಹಾಗೂ ಚರಿತ್ರೆಯಿಂದ ಸಾಹಿತ್ಯಾಸಕ್ತರ ಗಮನ ಸೆಳೆಯುತ್ತಿದೆ. 

ಗ್ರಂಥವನ್ನು ಬಟ್ಟೆಯಲ್ಲಿ ಸುತ್ತಿಟ್ಟಾಗ ಅದೊಂದು ಪುಟ್ಟ ಪೆಟ್ಟಿಗೆಯಂತೆ ಕಾಣುತ್ತದೆ. ಯಾರಾದರೂ ವಿದ್ವಾಂಸರು ಬಂದು ಆ ಗ್ರಂಥವನ್ನು ಬಿಚ್ಚುವಾಗ ಕುತೂಹಲದ ಕಣ್ಣುಗಳು ಅದರ ಮೇಲೆ ದೃಷ್ಟಿ ಬೀರುತ್ತವೆ. 

ಮುಂಬೈಯಲ್ಲಿ 1711ರಲ್ಲಿ ಮುದ್ರಿತವಾದ ಈ ಗ್ರಂಥವನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದ್ದು, ಮಹಾಭಾರತದ 12 ಪರ್ವಗಳನ್ನು ಒಳಗೊಂಡಿದೆ. 1986ರಿಂದ ಈ ಗ್ರಂಥವನ್ನು ವಿರಳ ಪುಸ್ತಕಗಳ ವಿಭಾಗದಲ್ಲಿ ಇಡಲಾಗಿದೆ.

‘ಮಹಾಭಾರತದ 18 ಪರ್ವಗಳ ಪೈಕಿ 12 ಪರ್ವಗಳು ಮಾತ್ರ ನಮ್ಮಲ್ಲಿ ಲಭ್ಯವಿವೆ. ಆದಿ, ವಿರಾಟ, ಉದ್ಯೋಗ, ಅಶ್ವಮೇಧ, ಸೌಪ್ತಿಕಾ, ಕರ್ಣ, ಸಭಾ, ಅನುಶಾಸನ, ವನ, ಸತ್ಯ, ದ್ರೋಣ ಮತ್ತು ಆಶ್ರಮವಾಸಿ ಪರ್ವಗಳು ಓದಲು ಲಭ್ಯ. ಒಟ್ಟಾರೆ 1,500ಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ ಗ್ರಂಥ ಇದಾಗಿದೆ. ಪುಟಗಳ ನಡುವೆ ಅಲ್ಲಲ್ಲಿ ಮರದ ಪಟ್ಟಿಗಳನ್ನು ಇರಿಸಲಾಗಿದೆ’ ಎಂದು ಜಿಲ್ಲಾ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಕೆ.ವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸಕ್ತರ ಅಧ್ಯಯನಕ್ಕೆಂದೇ ವೃದ್ಧರೊಬ್ಬರು ತುಂಬಾ ವರ್ಷಗಳ ಹಿಂದೆ ಈ ಗ್ರಂಥವನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದ್ದರು. ಆದರೆ, ಅವರ ಹೆಸರು ನೋಂದಣಿ ‍ಪುಸ್ತಕದಲ್ಲಿ ಉಲ್ಲೇಖವಾಗಿಲ್ಲ. ಆ ವೃದ್ಧರು ಯಾರು, ಎಲ್ಲಿಂದ ಅವರು ಈ ಪ್ರತಿಯನ್ನು ತಂದಿದ್ದರು ಎನ್ನುವ ವಿವರಗಳು ಲಭ್ಯವಿಲ್ಲ’ ಎಂದು ಹೇಳಿದರು.

‘ಪ್ರತಿ ವಾರ ಅಥವಾ ಹದಿನೈದು ದಿನಕ್ಕೊಮ್ಮೆ ಸಿಬ್ಬಂದಿ ಗ್ರಂಥವನ್ನು ತೆರೆದು ಪರಿಶೀಲಿಸುತ್ತೇವೆ. ಅದರ ಸಂರಕ್ಷಣೆಗೆ ರಾಸಾಯನಿಕ ಅಂಶಗಳ ಬದಲು ನಾಪ್ತಾಲಿನ್ ಗುಳಿಗೆಗಳನ್ನು ಇಟ್ಟು ಹತ್ತಿಯ ಬಟ್ಟೆಯಲ್ಲಿ ಸುತ್ತುತ್ತೇವೆ. ಗಾಳಿ ಆಡದಂತೆ ಬಿಗಿಯಾಗಿ ಕಟ್ಟಿ, ಕಪಾಟಿನಲ್ಲಿ ಇಡುತ್ತೇವೆ’ ಎಂದು ವಿವರಿಸಿದರು.

ಕಾರವಾರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಸಂರಕ್ಷಿಸಿಟ್ಟ ಮಹಾಭಾರತ ಗ್ರಂಥ
ಕಾರವಾರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಸಂರಕ್ಷಿಸಿಟ್ಟ ಮಹಾಭಾರತ ಗ್ರಂಥ
ಮಹಾಭಾರತ ಗ್ರಂಥದ ಒಳಪುಟಗಳು
ಮಹಾಭಾರತ ಗ್ರಂಥದ ಒಳಪುಟಗಳು
ಅಪರೂಪದ ಗ್ರಂಥವನ್ನು ಓದಲು ಬರುವವರು ಕಡಿಮೆ. ಹಿರಿಯ ಅಧ್ಯಯನಕಾರರು ಸಂಸ್ಕೃತ ಪಾಠಶಾಲೆಗಳ ಮುಖ್ಯಸ್ಥರು ಮುಂಚಿತವಾಗಿ ತಿಳಿಸಿ ಬರುತ್ತಾರೆ
- ರಾಘವೇಂದ್ರ ಕೆ.ವಿ. ಉಪನಿರ್ದೇಶಕ ಉಪನಿರ್ದೇಶಕ ಜಿಲ್ಲಾ ಗ್ರಂಥಾಲಯ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT