ಮುಂಡಗೋಡ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಮೂರು ದಿನಗಳ ಪ್ರವಾಸಕ್ಕಾಗಿ, ತಾಲ್ಲೂಕಿನ ಟಿಬೆಟನ್ ಕ್ಯಾಂಪ್ಗೆ ಮಂಗಳವಾರ ಆಗಮಿಸಿದರು.
ಕ್ಯಾಂಪ್ ನಂ.1ರ ಗಾಡೆನ್ ಜಾಂಗತ್ಸೆ ಬೌದ್ಧಮಂದಿರದಲ್ಲಿ ಹಿರಿಯ ಬಿಕ್ಕುಗಳು ಸಾಂಪ್ರದಾಯಿಕ ಸ್ವಾಗತ ಕೋರಿದರು. ಬೌದ್ಧ ಮಂದಿರದಲ್ಲಿ ಇರುವ ದಲೈಲಾಮಾ ಪೀಠಕ್ಕೆ ಅವರು ನಮಸ್ಕರಿಸಿ, ಬೌದ್ಧ ಮಂದಿರದ ಸಾಂಪ್ರದಾಯಿಕ ಆತಿಥ್ಯ ಸ್ವೀಕರಿಸಿದರು.
ಗಾಡೆನ್ ಜಾಂಗತ್ಸೆ ಬೌದ್ಧ ಮಂದಿರದ ಆವರಣದಲ್ಲಿ ಸೆಂಟ್ರಲ್ ಟಿಬೆಟನ್ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಕೊಳಲು ಹಾಗೂ ವಾದ್ಯ ನುಡಿಸುತ್ತ ಸ್ವಾಗತಿಸಿದರು. ಬಿಕ್ಕುಗಳು ಬಿಳಿ ರುಮಾಲು ಕೈಯಲ್ಲಿ ಹಿಡಿದುಕೊಂಡು ಮುಖ್ಯಮಂತ್ರಿಯನ್ನು ಬರಮಾಡಿಕೊಂಡರು. ಟಿಬೆಟನ್ ಮಹಿಳೆಯರು ಸಾಂಪ್ರದಾಯಿಕ ವೇಷಭೂಷಣ ಧರಿಸಿ, ಸ್ವಾಗತಿಸಿದರು.
ಟಿಬೆಟನ್ ಕ್ಯಾಂಪ್ ನಂ.1ರ ಗಾಡೆನ್ ಜಾಂಗತ್ಸೆ ಬೌದ್ಧ ಮಂದಿರದ ಆವರಣದಲ್ಲಿ ಟಿಬೆಟನ್ ಮಹಿಳೆಯರು ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಸ್ವಾಗತಿಸಿದರು.
ತಾಲ್ಲೂಕಿನ ವಡಗಟ್ಟಾ ಚೆಕ್ಪೋಸ್ಟ್ನಲ್ಲಿ ಜಿಲ್ಲಾಡಳಿತದ ವತಿಯಿಂದ ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್., ತಹಶೀಲ್ದಾರ್ ಶಂಕರ ಗೌಡಿ ಮುಖ್ಯಮಂತ್ರಿ ಅವರನ್ನು ಸ್ವಾಗತಿಸಿದರು. ಗಾಡೆನ್ ಜಾಂಗತ್ಸೆ ಮೊನ್ಯಾಸ್ಟರಿ ಹಾಗೂ ಡ್ರೆಪುಂಗ್ ಮೊನ್ಯಾಸ್ಟರಿಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದು, ನ.16ರಂದು ಸಾಯಂಕಾಲ ಹುಬ್ಬಳ್ಳಿ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.
ಕಿರಿಯ ಬಿಕ್ಕು ಲಾಗ್ಯಾಲಾ ರಿನ್ಪೋಚೆ, ಡೊಗುಲಿಂಗ್ ಸೆಟ್ಲಮೆಂಟ್ ಕಚೇರಿಯ ಚೇರಮನ್ ಲಾಖ್ಪಾ ಡೊಲ್ಮಾ, ಗಾಡೆನ್ ಜಾಂಗತ್ಸೆ ಬೌದ್ಧ ಮಂದಿರದ ಹಿರಿಯ ಬಿಕ್ಕುಗಳು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ.ಜಯಕುಮಾರ, ಶಿರಸಿ ಡಿಎಸ್ಪಿ ಗಣೇಶ ಕೆ.ಎಲ್, ಸಿಪಿಐ ಬಿ.ಎಸ್.ಲೋಕಾಪುರ ಇದ್ದರು.
ಕಿರಿಯ ಬಿಕ್ಕುಗಳು ತ್ರಿವರ್ಣ ಧ್ವಜ ಹಿಡಿದು ಮುಖ್ಯಮಂತ್ರಿ ಪೇಮಾ ಖಂಡು ಸ್ವಾಗತಕ್ಕೆ ನಿಂತಿರುವುದು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.