ಕಾರವಾರ: ಇಲ್ಲಿನ ಬಾಡ ಗ್ರಾಮದ ಬಂಡಿಹಬ್ಬವು ಗುರುವಾರ ಅದ್ದೂರಿ ಆಚರಣೆಯೊಂದಿಗೆ ಮುಕ್ತಾಯಗೊಂಡಿತು.
ಮೇ 10 ರಂದು ಅಕ್ಷಯ ತೃತೀಯ ಹಬ್ಬದ ದಿನ ಕಳಸ ದೇವಸ್ಥಾನದಿಂದ ಕಳಸ ಹೊರ ತೆಗೆಯುವ ಮೂಲಕ ಹಬ್ಬದ ಆಚರಣೆಗೆ ಚಾಲನೆ ದೊರೆತಿತ್ತು. ಬಳಿಕ ಕಳಸ ಹೊತ್ತ ಗುನಗರು ಗ್ರಾಮದ ವ್ಯಾಪ್ತಿಯ ಎಲ್ಲ 18 ಪರಿವಾರ ದೇವಸ್ಥಾನಗಳಿಗೂ ತೆರಳಿದ್ದರು. ಅಲ್ಲಿ ಭಕ್ತರು ಕಳಸಕ್ಕೆ ಪೂಜೆ ಸಲ್ಲಿಸಿದ್ದರು.
ಎಲ್ಲ ಗ್ರಾಮಗಳ ಸಂಚಾರ ಮುಕ್ತಾಯಗೊಂಡ ಬಳಿಕ ಬುಧವಾರ ರಾತ್ರಿ ಕಳಸವನ್ನು ಬಾಂಡಿಶಿಟ್ಟಾದಲ್ಲಿರುವ ರಾಟೆ ಕಟ್ಟೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಅಲ್ಲಿ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಳಸ ಹೊತ್ತವರನ್ನು ರಾಟೆಯಲ್ಲಿ ಕೂರಿಸಿ ತಿರುಗಿಸಲಾಯಿತು. ಈ ವೇಳೆ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು.
ಗುರುವಾರ ಕಳಸ ದೇವಸ್ಥಾನದಲ್ಲಿ ದೇವಿಗೆ ಉಡಿ ಹಾಗೂ ಗಿಂಡಿ ತುಂಬುವ ಮೂಲಕ ಬಂಡಿ ಹಬ್ಬಕ್ಕೆ ತೆರೆಬಿದ್ದಿತು.
ಪೂರ್ವಜರ ಯಶೋಗಾಥೆಯನ್ನು ನೆನಪಿಸುವ ಜತೆಗೆ ಜನಪದ ಶೈಲಿಯ ಜೀವನಗಾಥೆಯನ್ನು ಬಂಡಿಹಬ್ಬದ ಆಚರಣೆಗಳು ಸಾರಿ ಹೇಳುತ್ತದೆ. ಈ ಹಬ್ಬದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದರೆ ಸಂಕಷ್ಟಗಳು ಪರಿಹಾರ ಕಾಣುತ್ತವೆ ಎಂಬ ನಂಬಿಕೆ ಇದೆ.
ಕಾರವಾರದಲ್ಲಿ ಬಾಡ ಬಂಡಿಹಬ್ಬದ ಅಂಗವಾಗಿ ಕಳಸ ಹೊತ್ತ ಗುನಗರನ್ನು ರಾಟೆಯ ಮೇಲೆ ಕೂರಿಸಿ ತಿರುಗಿಸಲಾಯಿತು.