ಬನವಾಸಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಧುಕೇಶ್ವರ ದೇವಸ್ಥಾನ ಸಾಮಾನ್ಯವಾದ ದೇವಸ್ಥಾನವಲ್ಲ. ಸಮಸ್ತ ಕನ್ನಡಿಗರ ಕುಲದೇವಸ್ಥಾನವಾಗಿದೆ. ನಾನು ಕನ್ನಡಿಗ ಎಂದು ಹೇಳುವವರಿಗೆ ಮಧುಕೇಶ್ವರ ದೇವರು ಕುಲದೇವರಾಗಿದ್ದಾರೆ. ಇಂಥ ಮಧುಕೇಶ್ವರ ದೇವಸ್ಥಾನ ಕಳೆದ ಹತ್ತು ವರ್ಷಗಳಿಂದ ಸೋರುತ್ತಿದೆ. ಮಳೆಗಾಲದಲ್ಲಿ ಮಧುಕೇಶ್ವರ ದೇವರ ಮೇಲೆಯೇ ನೀರು ಬೀಳುತ್ತದೆ. ಸತತ ಹೋರಾಟದ ನಂತರ ಅಧಿಕಾರಿಗಳು ತಾಡಪತ್ರಿ ಹೊದಿಕೆ ಹಾಕಿದ್ದಾರೆ. ಐತಿಹಾಸಿಕ ದೇವಸ್ಥಾನಕ್ಕೆ ಈ ಹೊದಿಕೆ ಮಾಡಿರುವುದು ಅವಮಾನದ ಸಂಗತಿ. ಇದೇ ದೇವಸ್ಥಾನದಲ್ಲಿ ಸರಸ್ವತಿ ದೇವಿಯ ವಿಗ್ರಹ ಸಹ ಈ ಹಿಂದೆ ಇದ್ದಿತ್ತು. ಅದು ಬಿದ್ದ ಮೇಲೆ ಪುನರ್ ಪ್ರತಿಷ್ಠಾಪನೆ ಸಹ ಮಾಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.