ಕಾರವಾರ: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಆಚರಣೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಆರಂಭವಾಗಿದೆ. ಶ್ರದ್ಧಾ ಭಕ್ತಿಯೊಂದಿಗೆ ಮುಸ್ಲಿಮರು ಸಂಭ್ರಮದಿಂದ 'ಈದ್ ಉಲ್ ಫಿತರ್ ’ ಆಚರಣೆ ಮಾಡಿದರು.
ಮಂಗಳವಾರ ಚಂದ್ರ ದರ್ಶನವಾಯಿತು. ಈ ಹಿನ್ನೆಲೆಯಲ್ಲಿ 30 ದಿನಗಳ ಉಪವಾಸ ವ್ರತಾಚರಣೆಯನ್ನು ನಿಲ್ಲಿಸಿ ಜಿಲ್ಲೆಯಲ್ಲಿ ರಂಜಾನ್ ಹಬ್ಬ ಆಚರಿಸಿದರು.
ಭಟ್ಕಳದ ಈದ್ಗಾ ಮೈದಾನದಲ್ಲಿ ಸೇರಿದ ಸಾವಿರಾರು ಮುಸ್ಲಿಮರು ಅಲ್ಲಾಹುವಿಗೆ ದುವಾ ಸಲ್ಲಿಸಿದರು. ಪರಸ್ಪರ ಆಲಂಗಿಸುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.
ಜಿಲ್ಲೆಯಾದ್ಯಂತ ನೂರಾರು ಮಸೀದಿಗಳಲ್ಲೂ ಮುಂಜಾನೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮುಸ್ಲಿಮರು ಹೊಸ ಉಡುಗೆ ತೊಟ್ಟು ಪ್ರಾರ್ಥನೆ ಸಲ್ಲಿಸಿ ಸಂಭ್ರಮಿಸಿದರು.
ಭಟ್ಕಳದ ನವಾಯತ್ ಕಾಲೋನಿ, ಮದೀನಾ ಕಾಲೋನಿ, ಮಗ್ದುಂ ಕಾಲೊನಿ, ಚಿನ್ನದ ಪಳ್ಳಿ, ಕಾರವಾರದ ಗಫೂರಿ ಮಸೀದಿ, ಜಾಮಿಯಾ ಮಸೀದಿಗಳಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಳೆಗಾಗಿಯೂ ಕಾರವಾರದ ಕೆಲವು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ.