ದಾಂಡೇಲಿ: ನಗರದ ಕೊರೊನಾ ಸೋಂಕಿತನ (ರೋಗಿ ಸಂಖ್ಯೆ 1313) ಅಜ್ಜಿಯ 62 ವರ್ಷದ ಸಹೋದರಿ, ಕ್ವಾರೆಂಟೈನ್ನಲ್ಲಿದ್ದಸರ್ಕಾರಿ ಆಸ್ಪತ್ರೆಯಲ್ಲೇಶುಕ್ರವಾರ ಬೆಳಗಿನ ಜಾವನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ 24 ವರ್ಷದ ಲಾರಿ ಚಾಲಕನ ಸಹೋದರ, ತಾಯಿಯ ತಾಯಿ ಮತ್ತು ಅವರ ಸಹೋದರಿಯನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಯ ನಿಗಾ ಘಟಕದಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ಅಲ್ಲಿ ಕಿಟಕಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ತಹಶೀಲ್ದಾರ್ ಶೈಲೇಶ ಪರಮಾನಂದ ಹಾಗೂ ನಗರ ಠಾಣೆಯ ಪಿ.ಎಸ್.ಐ ಯಲ್ಲಪ್ಪ,ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಜೊತೆ ವೈಯಕ್ತಿಕ ರಕ್ಷಾ ಸಾಧನ ಧರಿಸಿ ಪಂಚನಾಮೆ ನಡೆಸಿದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಪ್ರಿಯಾಂಗಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ ಕುಮಾರ ಮಾಹಿತಿ ಪಡೆದುಕೊಂಡಿದ್ದಾರೆ.
ಮೃತರ ಗಂಟಲುದ್ರವದ ಮಾದರಿಯನ್ನು ಎರಡು ದಿನಗಳ ಹಿಂದೆಯೇ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಬರಬೇಕಿದೆ. ಅವರು ಆತ್ಮಹತ್ಯೆ ಮಾಡಿಕೊಂಡ ಕಾರಣ ಶುಕ್ರವಾರ ಪುನಃ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.ಸಂಜೆಯವರೆಗೂ ವರದಿ ಬಂದಿಲ್ಲ ಎಂದು ತಹಶೀಲ್ದಾರ್ ಶೈಲೇಶ ಪರಮಾನಂದ ತಿಳಿಸಿದ್ದಾರೆ.
ವರದಿಯಲ್ಲಿ ಕೋವಿಡ್ 19 ಪಾಸಿಟಿವ್ ಬಂದರೆ ಸರ್ಕಾರದ ಶಿಷ್ಟಾಚಾರದಂತೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ನೆಗೆಟಿವ್ ಬಂದರೆ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.