ಶಿರಸಿ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆ ಕಳೆದುಕೊಂಡು ಅತಂತ್ರರಾದ ತಾಲ್ಲೂಕಿನ ರೇವಣಕಟ್ಟಾದ ಹದಿನೈದಕ್ಕೂ ಹೆಚ್ಚು ಕುಟುಂಬಗಳು ತಾತ್ಕಾಲಿಕ ಸೂರು ನಿರ್ಮಿಸಿಕೊಳ್ಳಲು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ನೆರವು ನೀಡಿದ್ದಾರೆ.
ಸುರಕ್ಷಿತ ಸ್ಥಳದಲ್ಲಿ ಸಂತ್ರಸ್ತರು ತಾತ್ಕಾಲಿಕವಾಗಿ ವಸತಿ ಮಾಡಲು ಮನೆ ನಿರ್ಮಿಸಿಕೊಳ್ಳುತ್ತಿದ್ದು, ಅದಕ್ಕೆ ಅಗತ್ಯವಿರುವ ಶೀಟ್ಗಳು, ನೆಲಹಾಸು ಕಲ್ಲುಗಳನ್ನು ಸ್ವಂತ ವೆಚ್ಚದಲ್ಲಿ ಪೂರೈಸಿದ್ದಾರೆ. ಈ ಮೂಲಕ ಸಂತ್ರಸ್ತರಲ್ಲಿ ಧೈರ್ಯ ತುಂಬಿದ್ದಾರೆ.
ನೆರೆ ಸ್ಥಿತಿ ಸಂಭವಿಸಿದ್ದ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಅವರು ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದರು. ಅಗತ್ಯ ನೆರವು ನೀಡುವ ಭರವಸೆ ನೀಡಿದ್ದರು. ಮಂಗಳವಾರವೇ ರೇವಣಕಟ್ಟಾ ಗ್ರಾಮಕ್ಕೆ ಅಗತ್ಯ ಪರಿಕರಗಳನ್ನು ಕಳುಹಿಸಿಕೊಡಲಾಗಿತ್ತು. ಬುಧವಾರ ಸಂತ್ರಸ್ತರಿಗೆ ಪುನಃ ಧೈರ್ಯ ತುಂಬಿ ಅವುಗಳನ್ನು ಹಸ್ತಾಂತರಿಸಿದರು.
ಇಟಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನವಗ್ರಾಮ ಇನ್ನಿತರ ಕಡೆಗಳ ನೆರೆಬಾಧಿತ ಸ್ಥಳಗಳಿಗೂ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಇಲ್ಲಿನ ಕೆರಿಯಾ ಗೌಡ, ಸೀತಾರಾಮ, ಅಶೋಕ, ಬೆಳ್ಳಿ ಇನ್ನಿತರರ ಮನೆಗೆ ಭೇಟಿ ನೀಡಿ ನೆರವು ಒದಗಿಸುವ ಭರವಸೆ ನೀಡಿದ್ದಾರೆ.
‘ಅತಿವೃಷ್ಟಿಯಿಂದ ಜನರು ಕಷ್ಟ ಎದುರಿಸುತ್ತಿದ್ದಾರೆ. ವ್ಯಾಪಕ ಪ್ರಮಾಣ ಆಸ್ತಿ, ಬೆಳೆ ಹಾನಿಗೀಡಾಗಿದೆ. ಇಂತಹ ಸಂಕಷ್ಟದಲ್ಲಿ ಜನಪ್ರತಿನಿಧಿಗಳು ಜರನ ನೆರವಿಗೆ ಧಾವಿಸದಿರುವುದು ಸರಿಯಲ್ಲ’ ಎಂದು ಭೀಮಣ್ಣ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಮುಖರಾದ ಎಸ್.ಕೆ. ಭಾಗವತ, ಜಗದೀಶ ಗೌಡ, ವಿ.ಎಂ. ಹೆಗಡೆ, ಗೀತಾ ಭೋವಿ ಇದ್ದರು.