ಗೋಕರ್ಣ: ‘ಕರಾವಳಿ ಕಾವಲುಪಡೆಗೆ 30 ಹೊಸ ದೋಣಿಗಳ ಖರೀದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಈ ಕಾವಲುಪಡೆಯನ್ನು ವಿಕೇಂದ್ರೀಕರಣ ಮಾಡುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಗೋಕರ್ಣದಲ್ಲಿ ಮಂಗಳವಾರ ತ್ರಿಪಿಂಡಿ ಶ್ರಾದ್ಧ, ತಿಲಹವನ ನಡೆಸಿ, ಪಿತೃಕಾರ್ಯ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಹುದ್ದೆ ಭರ್ತಿ:‘ಪೊಲೀಸ್ ಇಲಾಖೆಗೆ ನಮ್ಮ ಸರ್ಕಾರ ಸಾಕಷ್ಟು ಪ್ರೋತ್ಸಾಹ ಕೊಟ್ಟಿದೆ. ನಾಲ್ಕು ವರ್ಷಗಳ ಹಿಂದೆ 33 ಸಾವಿರ ಹುದ್ದೆಗಳು ಖಾಲಿಯಿದ್ದವು. ಈಗ 12 ಸಾವಿರವಷ್ಟೇ ಇದೆ. ಸಬ್ ಇನ್ಸ್ಪೆಕ್ಟರ್ ಹುದ್ದೆ ಯಾವುದೂ ಖಾಲಿ ಇಲ್ಲದಂತೆ ನೋಡಿಕೊಳ್ಳಲಾಗಿದೆ’ ಎಂದು ಹೇಳಿದರು.
ಮತಬ್ಯಾಂಕ್ಗಾಗಿ ಜೊಲ್ಲು:‘ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಮಾತ್ರ ಈ ಹಿಂದಿನ ಮತ್ತು ಈಗಿನ ಆರೆಸ್ಸೆಸ್ನಲ್ಲಿ ಅಂತರ ಕಾಣಿಸುತ್ತದೆ. ಯಾವ ಅಂತರವೂ ಇಲ್ಲ. ಅಲ್ಪಸಂಖ್ಯಾತರ ಮತಕ್ಕಾಗಿ ಜೊಲ್ಲು ಸುರಿಸೋದು ಬಿಟ್ಟರೆ ಮತ್ತೇನೂ ಇಲ್ಲ. ಆರೆಸ್ಸೆಸ್ ಬಗ್ಗೆ ಎಷ್ಟು ಕೆಳಮಟ್ಟದಲ್ಲಿ ಮಾತನಾಡ್ತೀವೋ ಅಲ್ಪಸಂಖ್ಯಾತರ ಮತ ಅಷ್ಟು ಹೆಚ್ಚು ಮತಗಳು ಸಿಗುತ್ತವೆ ಎಂದು ಭಾವಿಸಿದ್ದಾರೆ. ಇದೆಲ್ಲ ಅವರ ಭ್ರಮೆ ಅಷ್ಟೇ. ಆರೆಸ್ಸೆಸ್ ಅನ್ನು ದೂರಿದಷ್ಟೂ ಅವರೇ ಕಳೆದುಹೋಗ್ತಿದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.