ಕಾರವಾರ: ಕೊರೊನಾ ಕಾರಣದಿಂದಾಗಿ ನಗರದ ಕಡಲತೀರದಲ್ಲಿ ಹೊಸ ವರ್ಷಾಚರಣೆಗೆ ಈ ವರ್ಷ ಅವಕಾಶ ಸಿಗಲಿಲ್ಲ. ಸಂಜೆಯಿಂದಲೇ ಪೊಲೀಸರು ಬಂದೊಬಸ್ತ್ ಏರ್ಪಡಿಸಿ ಯಾರೂ ಕಡಲತೀರ ಪ್ರವೇಶಿಸದಂತೆ ತಡೆದರು.
ಭಾರತೀಯ ದಂಡಸಂಹಿತೆಯ 144ನೇ ಸೆಕ್ಷನ್ ಪ್ರಕಾರ ಕಡಲತೀರಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಡಿ.31ರ ಸಂಜೆ 4ರಿಂದ ಜ.1ರ ಬೆಳಿಗ್ಗೆ 6ರವರೆಗೆ ಈ ಆದೇಶ ಅನ್ವಯವಾಗಲಿದೆ. ಹಾಗಾಗಿ ಐವರು ಮತ್ತು ಹೆಚ್ಚು ಜನ ಸೇರಲೂ ಅವಕಾಶವಿಲ್ಲ. ನಿಯಮ ಮೀರಿ ಯಾರಾದರೂ ಗುಂಪುಗೂಡಿದರೆ ಗಮನಿಸುವ ಸಲುವಾಗಿ ಪೊಲೀಸರು ಡ್ರೋನ್ ಕ್ಯಾಮೆರಾ ಬಳಕೆ ಮಾಡಿದ್ದಾರೆ. ಕಡಲತೀರದಲ್ಲಿ ತೆರೆಯಲಾಗಿದ್ದ ತಾತ್ಕಾಲಿಕ ಮಾರಾಟ ಮಳಿಗೆಗಳನ್ನೂ ಮುಚ್ಚುವಂತೆ ಪೊಲೀಸರು ಸೂಚಿಸಿದರು.
ಪ್ರತಿ ವರ್ಷ ಈ ಸಂದರ್ಭದಲ್ಲಿ ಜನದಟ್ಟಣೆಯಿಂದ ಕೂಡಿರುತ್ತಿದ್ದ ರವೀಂದ್ರನಾಥ ಟ್ಯಾಗೋರ್ ಕಡಲತೀರವು ಗುರುವಾರ ಸಂಜೆ ಭಣಗುಟ್ಟುತ್ತಿತ್ತು. ಈ ರೀತಿಯ ಸನ್ನಿವೇಶವು ಇದೇ ಮೊದಲ ಬಾರಿಗೆ ಕಂಡುಬಂದಿದೆ ಎಂದು ಕೋಡಿಬಾಗದ ದಿನೇಶ ನಾಯ್ಕ ಹೇಳಿದರು. ಎಂದಿನಂತೆ ವಾಯುವಿಹಾರಕ್ಕೆ ಬಂದಿದ್ದ ಅವರನ್ನು ಪೊಲೀಸರು ಕಡಲತೀರ ಪ್ರವೇಶಿಸಲು ಅವಕಾಶ ಕೊಟ್ಟಿರಲಿಲ್ಲ.
ಹೊಸ ವರ್ಷಾಚರಣೆಗೆ ಮನೆಗಳಲ್ಲಿ ಸಿದ್ಧತೆ ಮಾಡಿಕೊಂಡವರು ಕೇಕ್ಗಳು, ಸಿಹಿ ತಿನಿಸು, ತಂಪು ಪಾನೀಯಗಳನ್ನು ಖರೀದಿಸಿದರು. ಹಾಗಾಗಿ ಬೇಕರಿಗಳಲ್ಲಿ ಬೆಳಿಗ್ಗೆಯಿಂದಲೇ ನೂರಾರು ಗ್ರಾಹಕರು ಕಂಡುಬಂದರು.