ಶಿರಸಿ: ‘ಕೊಂಕಣಿ ಕೆಲವು ಜಾತಿ, ಧರ್ಮಗಳಿಗೆ ಸೀಮಿತವಾದ ಭಾಷೆಯಲ್ಲ. ಇದು ಸಮಾಜದಲ್ಲಿಸೌಹಾರ್ದವನ್ನು ಗಟ್ಟಿಗೊಳಿಸುವ ಸಂವಹನ ಮಾಧ್ಯಮ’ ಎಂದು ನಗರದ ಸೇಂಟ್ ಅಂಥೋನಿ ಚರ್ಚ್ನ ಫಾದರ್ ಜಾನ್ ಫರ್ನಾಂಡಿಸ್ ಹೇಳಿದರು.
ಇಲ್ಲಿನ ನೆಮ್ಮದಿ ಕುಟೀರದ ಕಣಜದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣ ಕಲಾ ಮಂಡಳ ಶುಕ್ರವಾರ ಆಯೋಜಿಸಿದ್ದ ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಐದು ಭಾಷೆಗಳ ಲಿಪಿಯಲ್ಲಿ ಕೊಂಕಣಿ ಬರೆಯಲು ಸಾಧ್ಯವಿದೆ. ಹೀಗಾಗಿ ಭಾಷೆಯ ವಿಸ್ತಾರಕ್ಕೂ ಅವಕಾಶ ಹೆಚ್ಚಿದೆ’ ಎಂದರು.
ಕೊಂಕಣಿ ಸಾಹಿತ್ಯ ಅಕಾಡೆಮಿ ಸಂಚಾಲಕ ಡಾ.ವಸಂತ ಬಾಂದೇಕರ್, ‘ಕೊಂಕಣಿ ಭಾಷೆ ಪ್ರಾದೇಶಿಕ ಮಿತಿಯನ್ನೂ ದಾಟಿ ವಿಶ್ವದ ಹಲವು ಕಡೆ ವ್ಯಾಪಿಸಿದೆ. ದೇಶದ ಪ್ರಮುಖ 22 ಭಾಷೆಗಳ ಪೈಕಿ ಕೊಂಕಣಿಗೂ ಸ್ಥಾನ ಸಿಕ್ಕಿದೆ’ ಎಂದರು.
ಸಾಧಕರಾದ ಯೋಗೀಶ ಶಾನಭಾಗ ಯಲ್ಲಾಪುರ, ಶೈಲಜಾ ಮಂಗಳೂರು ಅವರನ್ನು ಸನ್ಮಾನಿಸಲಾಯಿತು.