ಗೋಕರ್ಣ: ‘ಈಗ ನಡೆಯುತ್ತಿರುವುದು ಪಕ್ಷ– ಪಕ್ಷಗಳ ನಡುವಿನ ಹೋರಾಟವೇ ಹೊರತೂ, ಅಭ್ಯರ್ಥಿಗಳ ನಡುವಿನ ಚುನಾವಣೆಯಲ್ಲ. ಜನರಿಗೆ ಬೇಕಾಗಿರುವುದು ಅಭಿವೃದ್ಧಿ ಮಾಡಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಇಲ್ಲಿ ಅಭ್ಯರ್ಥಿ ಯಾರೆಂಬ ಪ್ರಶ್ನೆ ಉದ್ಭವಿಸುವುದಿಲ್ಲ’ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಮಂಗಳವಾರ ಸಂಜೆ ಗೋಕರ್ಣದಲ್ಲಿ ಮಹಾಗಣಪತಿ, ಮಹಾಬಲೇಶ್ವರನಿಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಕೆನರಾ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಸತತವಾಗಿ 6 ಸಲ ಈ ಕ್ಷೇತ್ರವನ್ನು ನಾವು ಗೆದ್ದಿದ್ದೇವೆ. ಅದರಲ್ಲೂ ಈ ಸಲ ಜೆಡಿಎಸ್ ನಮ್ಮ ಪರವಾಗಿದೆ. ಜನ ಬಯಸುವುದು ಅಭಿವೃದ್ಧಿಯ ಆಡಳಿತ ಹೊರತೂ ಕಾಂಗ್ರೆಸ್ಸಿನ ಜಾತಿ ರಾಜಕಾರಣವಲ್ಲ. ರಾಮ ಮಂದಿರ ನಿರ್ಮಿಸಿ ಹೇಳಿದ ಮಾತನ್ನು ಉಳಿಸಿದ ಕೀರ್ತಿ ಮೋದಿ ಸರ್ಕಾರದ್ದು. ಲೋಕಸಭೆಗೆ ಆಯ್ಕೆಯಾದರೆ ಕಿತ್ತೂರು, ಖಾನಾಪುರ ಸೇರಿದಂತೆ ಇಡೀ ಉತ್ತರ ಕನ್ನಡ ಕ್ಷೇತ್ರದ ಅಭಿವೃದ್ಧಿ ನನ್ನ ಕನಸು. ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ನಂತರ ಆತ್ಮಬಲ ಹೆಚ್ಚಾಗಿದೆ. ಗೆಲುವು ನಮ್ಮ ಪಕ್ಷದ್ದೇ’ ಎಂದರು.
ಕಾಗೇರಿಯವರ ಜೊತೆಗಿದ್ದ ಜೆಡಿಎಸ್ನ ಸೂರಜ್ ನಾಯ್ಕ ಮಾತನಾಡಿ, ‘ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಬಿಜೆಪಿ ಅಭ್ಯರ್ಥಿಗೆ ಇದೆ. ವರಿಷ್ಠರ ಆದೇಶದಂತೆ ನಾವೆಲ್ಲಾ ಕಾಗೇರಿಯವರ ಗೆಲುವಿಗೆ ಶ್ರಮಿಸುತ್ತಿದ್ದೇವೆ. ಗೆಲುವು ಬಿಜೆಪಿ – ಜೆಡಿಎಸ್ ಲೋಕಸಭಾ ಅಭ್ಯರ್ಥಿಯದೇ’ ಎಂದರು.
ಇದಕ್ಕೂ ಮೊದಲು ಅವರು ಮಹಾಬಲೇಶ್ವರನ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಪಂಚಾಮೃತ, ನವಧಾನ್ಯ, ರುದಾಭಿಷೇಕ ನೆರವೇರಿಸಿ ಬಿಜೆಪಿ ಗೆಲುವಿಗಾಗಿ ಪ್ರಾರ್ಥಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದು, ಪೂಜಾ ಕಾರ್ಯ ನೆರವೇರಿಸಿಕೊಟ್ಟರು. ಕಾಗೇರಿಯವರ ಜೊತೆಗಿದ್ದರು.
ಬಿಜೆಪಿ ಕುಮಟಾ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಐ. ಹೆಗಡೆ, ಪ್ರಮುಖರಾದ ಸುಬ್ರಾಯ ವಾಳ್ಕೆ, ಗಜಾನನ ಪೈ, ಬಾಲಚಂದ್ರ ಪ್ರಸಾದ, ಮಹೇಶ ಶೆಟ್ಟಿ, ಮಂಜುನಾಥ ಜನ್ನು, ಮುರಳೀಧರ ಪ್ರಭು, ಹೇಮಂತ ಗಾಂವಕರ್, ಗಣೇಶ ಪಂಡಿತ, ದಯಾನಂದ ನಾಯ್ಕ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಶೇಖರ ನಾಯ್ಕ, ವಸಂತ ಶೆಟ್ಟಿ, ಭಾರತೀ ದೇವತೆ, ಜಗದೇಶ ಅಂಬಿಗ, ಜೆಡಿಎಸ್ನ ಮಹಾಬಲೇಶ್ವರ ಗೌಡ, ಅನಂತ ಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.