ಗೋಕರ್ಣ: ಸಮೀಪದ ಮಾದನಗೇರಿಯ ಮಹಾಲಸಾ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕಾರ್ತಿಕ ಸಂಕಷ್ಠಿಯ ದಿನವಾದ ಗುರುವಾರ ಭಕ್ತರ ಸಾಗರವೇ ಹರಿದು ಬಂದಿತು. 10 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಜಿ.ಎಸ್.ಬಿ ಸಮಾಜದವರಿಗೆ ಈ ದೇವಸ್ಥಾನ ಅತ್ಯಂತ ಪವಿತ್ರವಾದದ್ದು. ಈ ದಿನ ಗೌಡ ಸಾರಸ್ವತ ಸಮಾಜದವರು ದೂರದ ಊರುಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ಮುಖ್ಯ ಅರ್ಚಕರ ದರ್ಶನ ಕಾರ್ಯಕ್ರಮವೂ ಇದ್ದ ಕಾರಣ ರಾತ್ರಿ ಪೂರ್ಣ ದೇವಸ್ಥಾನದಲ್ಲಿ ಭಕ್ತರೇ ತುಂಬಿದ್ದರು.
ಭಕ್ತರ ಹರಕೆಯಂತೆ ದರ್ಶನ ಪಾತ್ರಿಗಳಾದ ಸುನೀಲ್ ಪೈ ಸುಮಾರು 20 ಸಾವಿರ ತೆಂಗಿನ ಕಾಯಿಯನ್ನು ಒಡೆದರು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಕುಮಟಾ ಶಾಸಕ ದಿನಕರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಸಹಿತ ಅನೇಕ ಜಿ.ಎಸ್.ಬಿ. ಸಮಾಜದ, ಇತರ ಸಮಾಜದ ಗಣ್ಯರು ಉಪಸ್ಥಿತರಿದ್ದರು. ಗೋವಾ, ಮುಂಬೈ, ಮಂಗಳೂರು, ಉಡುಪಿ, ಹುಬ್ಬಳ್ಳಿ ದೇವಸ್ಥಾನದ ಕುಳವಿಗಳು ಆಗಮಿಸಿದ್ದರು.
ಗೋಕರ್ಣ ಸಮೀಪದ ಮಾದನಗೇರಿಯ ಮಹಾಲಸಾ ಸಿದ್ಧಿವಿನಾಯಕ ದೇವಸ್ಥಾನ
ತಾರಿಮನೆ ಬ್ರಿಜ್ ಕುಸಿತ; ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ ಗ್ರಾಮಸ್ಥರು
ಯಲ್ಲಾಪುರ: ತಾಲ್ಲೂಕಿನ ಮಾವಿನಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮರಳ್ಳಿ ಗ್ರಾಮದ ಬಂಕೊಳ್ಳಿಯಿಂದ ತಾರಿಮನೆ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬ್ರಿಜ್ ಇತ್ತೀಚೆಗೆ ಚೀರೆಕಲ್ಲು ತುಂಬಿದ ಗಾಡಿ ಸಂಚರಿಸುವಾಗ ಕುಸಿದಿದೆ. ಚೀರೆಕಲ್ಲು ತುಂಬಿದ ಗಾಡಿ ಪಲ್ಟಿಯಾದ ಪರಿಣಾಮ ಚೀರೆಕಲ್ಲುಗಳು ಕೆಳಗಿನ ಹಳ್ಳದಲ್ಲಿ ಬಿದ್ದವು. ನಂತರ ಸುತ್ತ ಮುತ್ತಲ ಭಾಗದ ಗ್ರಾಮಸ್ಥರು ತಾವೇ ಮಣ್ಣನ್ನು ಹಾಕಿ ತಾತ್ಕಾಲಿಕವಾಗಿ ಲಘು ವಾಹನ ಸಂಚಾರಕ್ಕೆ ಅನುವು ಕಲ್ಪಿಸಿದ್ದಾರೆ. ‘ಈ ಬ್ರಿಜ್ ಕುಸಿದಿರುವ ಕಾರಣ ವಾಹನ ಸಂಚಾರ ಕಷ್ಟವಾಗಿದ್ದು ಇಲ್ಲಿಂದ ಶಾಲೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ಕಾರಣ ಸರ್ಕಾರ ಇಲ್ಲಿ ಉತ್ತಮ ಗುಣಮಟ್ಟದ ಬ್ರಿಜ್ ನಿರ್ಮಿಸಬೇಕು’ ಎಂದು ಮಾವಿನಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಬ್ಬಣ್ಣ ಕುಂಟೆಗಳಿ ಆಗ್ರಹಿಸಿದ್ದಾರೆ.