ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರ್ಚಕರಿಲ್ಲದ ಆಲಯದಲ್ಲಿ ನಿತ್ಯವೂ ಪೂಜೆ: ಹರಕೆ ರೂಪದಲ್ಲಿ ಗಂಟೆ ಅರ್ಪಿಸುವ ಭಕ್ತರು

ಹರಕೆ ರೂಪದಲ್ಲಿ ಗಂಟೆ ಅರ್ಪಿಸುವ ಭಕ್ತರು: ಎಲ್ಲರಿಗೂ ಪೂಜೆಗೆ ಅವಕಾಶ
Published 19 ಮೇ 2024, 4:51 IST
Last Updated 19 ಮೇ 2024, 4:51 IST
ಅಕ್ಷರ ಗಾತ್ರ

ಶಿರಸಿ: ಅರ್ಚಕರೇ ಇಲ್ಲದ ಆಲಯದಲ್ಲಿ ನಿತ್ಯವೂ ತಪ್ಪದೆ ಮಂಗಳಾರತಿ ಬೆಳಗುತ್ತದೆ. ಮೇಲು–ಕೀಳೆಂಬ ಭಾವನೆಗೆ ಅವಕಾಶವಿಲ್ಲದಂತೆ ದಿನವೂ ಎಪ್ಪತ್ತಕ್ಕೂ ಹೆಚ್ಚು ಪೂಜೆಗಳು ಸ್ವತಃ ಭಕ್ತರಿಂದಲೇ ನೆರವೇರುತ್ತವೆ. ಬಂದೆಲ್ಲ ಭಕ್ತರು ಬಯಲ ಆಲಯದಲ್ಲಿ ಕುಳಿತ ವಿಘ್ನನಿವಾರಕ ಗಣೇಶನ ದರ್ಶನದಿಂದ ಧನ್ಯರಾಗುತ್ತಾರೆ. 

ಸುತ್ತೆಲ್ಲ ಹಚ್ಚ ಹಸಿರಿನ ಅರಣ್ಯ ಪ್ರದೇಶ, ದಾರಿಯಂಚಿನ ಮಾವಿನ ಮರದಡಿ ನೆಲೆ ನಿಂತ ಗಣಪತಿ, ಆತನಿಗೆ ಬಯಲಿನೊಳಗೊಂದು ಆಲಯ, ಭಕ್ತರಿಂದಲೇ ಪೂಜೆ, ದೇವ ಕಟ್ಟೆಯ ಸುತ್ತಲೂ ಹರಕೆ ಗಂಟೆಗಳ ಸಾಲು ಸಾಲು... ಇಂಥದ್ದೊಂದು ವಿಶೇಷ ಎನಿಸುವ ಗಣಪತಿ ಆಲಯ ಇರುವುದು ತಾಲ್ಲೂಕಿನ ಬೆಂಡೆಗದ್ದೆ- ಅಂದಳ್ಳಿ ರಸ್ತೆಯಲ್ಲಿ.

ಇಲ್ಲಿಯ ಬಟ್ಟೆ ಗಣಪತಿ ಆಲಯ ಹಲವು ವಿಶೇಷತೆಯಿಂದ ಕೂಡಿದೆ. ಇಲ್ಲಿ ಜಾತಿ, ಪಂಥ, ಮೇಲು–ಕೀಳೆಂಬ ಯಾವ ಭಾವನೆಗೂ ಅವಕಾಶವಿಲ್ಲ. ಸ್ವತಃ ಭಕ್ತರೇ ದೇವರಿಗೆ ಪೂಜೆ ಮಾಡುವ ವ್ಯವಸ್ಥೆ ಶತಮಾನಗಳಿಂದ ಅನೂಚಾನವಾಗಿ ನೆರವೇರಿಕೊಂಡು ಬರುತ್ತಿದೆ. 

‘ಪುಟ್ಟನಮನೆ, ಹಾರೇಪಾಲ, ದೇವರಕೊಪ್ಪ, ಹುತ್ಗಾರ ನಾಲ್ಕು ಗ್ರಾಮಗಳಿಗೆ ಸೀಮಿತವಾಗಿದ್ದ ಈ ಶಕ್ತಿ ಕ್ಷೇತ್ರ ಇಂದು ರಾಜ್ಯವ್ಯಾಪಿಯ ಭಕ್ತರನ್ನು ಆಕರ್ಷಿಸುತ್ತಿದೆ. ಶತಮಾನಗಳ ಹಿಂದಿನಿಂದ ರಸ್ತೆ ಅಂಚಿನ ಕಟ್ಟೆ ನಡುವೆ ಮಾವಿನಮರ ಬುಡಕ್ಕೆ ಕಲ್ಲಿನ ಶಿಲೆಗೆ ಪೂಜೆ ನಡೆಯುತ್ತಿತ್ತು. 50 ವರ್ಷಗಳ ಹಿಂದೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಗುಡಿ ಸ್ಥಾಪನೆ ಕುರಿತಂತೆ ಸ್ವರ್ಣವಲ್ಲೀ ಮಠದ ಹಿಂದಿನ ಗುರುಗಳಾದ ಸರ್ವಜ್ಞೇಂದ್ರ ಸರಸ್ವತೀ ಸ್ವಾಮೀಜಿ ಅವರನ್ನು ಕೇಳಿದಾಗ, ಬಯಲಿನಲ್ಲಿರುವ ಗಣಪನಿಗೆ ಗುಡಿಯ ಸಂಕೋಲೆ ಬೇಡ. ಈಗಿರುವ ಕಟ್ಟೆಯ ಒಂದು ಕಲ್ಲನ್ನೂ ತೆಗೆಯಬೇಡಿ. ಅಭಿವೃದ್ಧಿ ಮಾಡಿ ಎಂದು ಸೂಚಿಸಿದ್ದರು. ಅದರಂತೆ ಗುಡಿ ಕಟ್ಟಿಲ್ಲ. ಆದರೆ ಸುತ್ತಮುತ್ತ ಅಭಿವೃದ್ಧಿ ಕಾರ್ಯ ಮಾಡಲಾಗಿದೆ’ ಎಂದು ಆಲಯದ ಟ್ರಸ್ಟ್ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಹುಲಿಮನೆ ಹೇಳಿದರು. 

‘ಭಕ್ತರು ಹರಕೆ ಹೇಳಿಕೊಂಡು ಅದು ಫಲಿಸಿದರೆ ಗಂಟೆ ಸಮರ್ಪಣೆ ಮಾಡುತ್ತಾರೆ. ಆ ಪ್ರಕಾರ 5 ಸಾವಿರಕ್ಕೂ ಹೆಚ್ಚು ಗಂಟೆಗಳು ಇಲ್ಲಿವೆ’ ಎಂದು ಸ್ಥಳೀಯರಾದ ರವಿ ಹೆಗಡೆ ಊರದೋಟ ಮಾಹಿತಿ ಹಂಚಿಕೊಂಡರು.

‘ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ ಭಾಗದವರು ಇಲ್ಲಿ ನಡೆದುಕೊಳ್ಳುವುದು ಹೆಚ್ಚು. ಬಂದ ಆದಾಯ ಆಲಯ ಅಭಿವೃದ್ಧಿಗೆ ಬಳಕೆ ಜತೆ ಗ್ರಾಮದ ಹುಲಿಯಪ್ಪನ ಕಟ್ಟೆ, ಕಣಗಲಮುರುಡು ಲಕ್ಷ್ಮೀನೃಸಿಂಹ ದೇವಸ್ಥಾನ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ. ಈ ಆಲಯ ಪ್ರತಿಯೊಬ್ಬರ ಸ್ವತ್ತಾಗಿದೆ’ ಎಂದು ತಿಳಿಸಿದರು. 

ವಿಶೇಷ ಪೂಜೆಗಷ್ಟೆ ಅರ್ಚಕರು

‘ಅಂಗಡಿಕಾರರು ವ್ಯಾಪಾರಿಗಳು ಆಟೊ ಜೆಸಿಬಿ ಸೇರಿ ಇತರ ಚಾಲಕ ವೃತ್ತಿ ಮಾಡುವವರು ಪೊಲೀಸರು ಸೇರಿ ಹಲವರು ಇಲ್ಲಿ ನಿತ್ಯ ಪೂಜೆ ಮಾಡುತ್ತಾರೆ. ವಿಶೇಷ ಪೂಜೆಗಳನ್ನು ಕೈಗೊಳ್ಳುವವರು ಅರ್ಚಕರನ್ನು ತಮ್ಮ ಜತೆಗೆ ಕರೆ ತರುತ್ತಾರೆ. ಚೌತಿ ಹಾಗೂ ದೀಪಾವಳಿಯಂದು ಗ್ರಾಮಸ್ಥರು ಅವರವರೇ ಪೂಜೆ ಮಾಡಿಕೊಳ್ಳುತ್ತಾರೆ. ವಾರ್ಷಿಕವಾಗಿ ಕಾರ್ತಿಕ ಬಹುಳ ಚೌತಿ ದಿನ ಗ್ರಾಮದವರು ಭಕ್ತರು ದೀಪೋತ್ಸವ ಮಾಡುತ್ತಾರೆ. ಅಂದು ಅರ್ಚಕರನ್ನು ಕರೆಸಿ ಧಾರ್ಮಿಕಾಚರಣೆ ಮಾಡಲಾಗುವುದು’ ಎಂದು ಸ್ಥಳೀಯರಾದ ರವಿ ಹೆಗಡೆ ಊರದೋಟ ವಿವರಿಸುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT