ಕುಮಟಾ: ಸಿಹಿ ಈರುಳ್ಳಿ ಬೆಳೆಗೆ ಪ್ರಸಿದ್ಧಿಯಾಗಿರುವ ತಾಲ್ಲೂಕಿನ ವನ್ನಳ್ಳಿ ಭಾಗದಲ್ಲಿ ಹಾವುಸುಳಿ ರೋಗಬಾಧೆಯಿಂದ ಈರುಳ್ಳಿ ಬೆಳೆಗಾರರು ಕಂಗೆಟ್ಟಿದ್ದಾರೆ.
ಪ್ರತೀ ವರ್ಷ ನೂರಾರು ಕ್ವಿಂಟಲ್ ಸಿಹಿ ಈರುಳ್ಳಿ ಬೆಳೆಯುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದ ರೈತರು ಈ ಬಾರಿ ರೋಗಬಾಧೆಯಿಂದ ಬೆಳೆ ಬೆಳೆಯಲು ಹಿಂದೇಟು ಹಾಕುವ ಸ್ಥಿತಿ ಉಂಟಾಗಿದೆ. ಹಾವುಸುಳಿ ರೋಗ ನಿಯಂತ್ರಣಕ್ಕೆ ರೈತರು ಹಲವು ಪ್ರಯೋಗ ನಡೆಸಿದರೂ ನಿಯಂತ್ರಣಕ್ಕೆ ಬಂದಿಲ್ಲ.
‘ಈರುಳ್ಳಿ ಬೀಜ ಬಿತ್ತಿ ಅವು ಸಸಿಯಾಗಿ ಬೆಳೆಯುವ ಮುನ್ನವೇ ರೋಗಕ್ಕೀಡಾಗುತ್ತಿದೆ. ಹಲವು ಸಸಿಗಳು ಹಾಳಾಗಿದ್ದು ಇದರಿಂದ ಬೆಸತ್ತು ಈರುಳ್ಳಿ ಬದಲು ಬೆಂಡೆ ಕಾಯಿ ಬೆಳೆಯಲು ಮುಂದಾಗುತ್ತಿದ್ದೇನೆ’ ಎಂದು ರೈತ ಬಾಬು ನಾಯ್ಕ ಹೇಳಿದರು.
‘ಪ್ರತೀ ವರ್ಷವೂ ಈರುಳ್ಳಿ ಸಸಿಯ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ ವರ್ಷ ಹಾನಿ ಅನುಭವಿಸಿದರೂ ಈ ವರ್ಷವಾದರೂ ಬೆಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಸಸಿ ನೆಟ್ಟರೆ ಈ ವರ್ಷ ಸಸಿ ಬೆಳೆಯುವ ಮುನ್ನವೇ ರೋಗಕ್ಕೀಡಾಗಿದೆ’ ಎಂದರು.
‘ಈರುಳ್ಳಿಗೆ ಯುರಿಯಾ ಬಳಸದೆ ಅದಕ್ಕೆ ಅಗತ್ಯವಿರುವ ಬೋರಿಯಂ ದ್ರಾವಣ ಹಾಗೂ ಸುಫಲಾ ಗೊಬ್ಬರ ಹಾಕಿ ನೆಟ್ಟ ಸಸಿಗಳು ಆರಂಭದಲ್ಲಿ ಚೆನ್ನಾಗಿ ಬಂದರೂ ಈಗ ಒಂದು ಬದಿಯಿಂದ ರೋಗಕ್ಕೀಡಾಗುತ್ತಿದೆ. ಸಸಿ ನೆಡಲು ಖರ್ಚು ಮಾಡಿದ ₹50 ಸಾವಿರ ಮೈಮೇಲೆ ಬರುತ್ತಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಸಮಸ್ಯೆ ನಿವಾರಿಸಲು ಮುಂದಾಗಬೇಕಿದೆ’ ಎಂದು ಪ್ರಗತಿಪರ ಕೃಷಿಕ ನಾಗೇಶ ನಾಯ್ಕ ಒತ್ತಾಯಿಸಿದರು.