ದಾಂಡೇಲಿ: ಧಾರವಾಡ ಜಿಲ್ಲೆಯ ಚಿಕ್ಕಮಲ್ಲಿಗೆವಾಡದ ಗ್ರಾಮದ ಶಂಕಪ್ಪ ಧಾರವಾಡದ ಎನ್ನುವರು ಹರಕೆ ತೀರಸಲು ಅಂದಾಜು 170 ಕಿಲೊ ಮೀಟರ್ ದೂರವಿರುವ ಶ್ರೀಕ್ಷೇತ್ರ ಉಳಿವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಬರಲು ಚಕ್ಕಡಿ (ಎತ್ತಿನ ಗಾಡಿ) ಎಳೆದುಕೊಂಡು ಪಾದಯಾತ್ರೆ ಕೈಗೊಂಡಿದ್ದಾರೆ.
ಭಾನುವಾರ ದಾಂಡೇಲಿ-ಹಳಿಯಾಳ ರಸ್ತೆಯಲ್ಲಿ ಚಕ್ಕಡಿ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂತು.
ಶಂಕಪ್ಪ ಅವರಿಗೆ ಸಹಾಯಕರಾಗಿ ಬಸವರಾಜ ಕೊಣ್ಣನ್ನವರ, ನಾಗರಾಜ ಕಮತಿ ಜೊತೆಯಾಗಿದ್ದಾರೆ.
‘ಫೆ. 24 ರಂದು ನಡೆಯುವ ಉಳವಿ ಚನ್ನಬಸವೇಶ್ವರ ಜಾತ್ರೆಗೆ ಧಾರವಾಡದ ಚಿಕ್ಕಮಲ್ಲಿಗೆವಾಡ ಗ್ರಾಮದಿಂದ ಫೆ. 17ರ ಸಂಜೆ ಊರಿನ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭಿಸಿದ್ದೇವೆ. ಅಲ್ಲಿಂದ ಚಕ್ಕಡಿ ಗಾಡಿ ಎಳೆದುಕೊಂಡು ಪಾದಯಾತ್ರೆಯೂ ಒಂದೇ ದಿನದಲ್ಲಿ 90 ಕಿ.ಮೀ. ಕ್ರಮಿಸಿ ದಾಂಡೇಲಿಗೆ ತಲುಪಿದ್ದೇವೆ. ಇನ್ನುಳಿದ 80 ಕಿ.ಮೀ. ಮಾರ್ಗ ಕ್ರಮಿಸಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಉಳಿವಿ ತಲುಪಲಿದ್ದೇವೆ’ ಎನ್ನುತ್ತಾರೆ ನಾಗರಾಜ ಕಮತಿ.
‘ಪಾದಯಾತ್ರೆ ಶುರುವಾದ ನಂತರ ಹಳಿಯಾಳ ಸಮೀಪ ರಾತ್ರಿ ಎರಡು ಗಂಟೆ ವಿಶ್ರಾಂತಿ ಪಡೆದಿದ್ದು ಬಿಟ್ಟರೆ ಬೇರೆ ಎಲ್ಲಿಯೂ ನಿಂತಿಲ್ಲ. ಈಗ ಒಂದೇ ದಿನದಲ್ಲಿ 90 ಕಿ.ಮೀ ಕ್ರಮಿಸಿದ್ದೇವೆ. ಭಾನುವಾರ ರಾತ್ರಿ ಇನ್ನುಳಿದ ದಾರಿಯನ್ನು ಮುಗಿಸಿ ಉಳವಿ ತಲುಪಿ, ಹರಕೆ ತೀರಿಸಿ ದೇವರ ಕೃಪೆಗೆ ಪಾತ್ರರಾಗುತ್ತೇವೆ’ ಎಂದರು.
‘ನಾವು ರೈತರು. ಎತ್ತು, ಆಡು, ಎಮ್ಮೆ ಇತರೆ ಜಾನುವಾರು ಸುಖವಾಗಿರಲಿ ಹಾಗೂ ಮಳೆ, ಬೆಳೆ ಸಮೃದ್ಧವಾಗಿ ಬರಲಿ. ದೇಶ ಸುಭಿಕ್ಷವಾಗಿರಲಿ ಎನ್ನುವ ಕಾರಣಕ್ಕೆ ಈ ಹರಿಕೆಯನ್ನು ಹೊತ್ತುಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.