ಕಾರವಾರ: ‘ಮೂಲವನ್ನು ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಹೊಣೆ. ಶಂಕರಾಚಾರ್ಯರು ರಘೂತ್ತಮ ಮಠವನ್ನು ಸ್ಥಾಪಿಸಿದ ಅಶೋಕೆಯ ಪುನರುತ್ಥಾನ ಕಾರ್ಯ ಸದ್ಯದಲ್ಲೇ ಆರಂಭವಾಗಲಿದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಗೋಕರ್ಣದ ಅಶೋಕೆಯ ಮಲ್ಲಿಕಾರ್ಜುನ ಸ್ವಾಮಿಗೆ ಏಳು ದಿನಗಳಿಂದ ನಡೆಯುತ್ತಿರುವ ಅತಿರುದ್ರ ಅಭಿಷೇಕದ ಸಂದರ್ಭದಲ್ಲಿ ರುದ್ರಸೇವೆಗೆ ಉಪ್ಪಿನಂಗಡಿ ಮಂಡಲದಿಂದ ಆಗಮಿಸಿದ್ದ ಶಿಷ್ಯರನ್ನು ಉದ್ದೇಶಿಸಿ ಅವರು ಆಶೀರ್ವಚನ ನೀಡಿದರು.
‘ಆದಿ ಗುರು ಶಂಕರರ ಸಂಕಲ್ಪದ ಫಲವಾಗಿ ಮಠದ ಅವಿಚ್ಛಿನ್ನ ಪರಂಪರೆ ಮುಂದುವರಿದಿದೆ. ಕಾರಣಾಂತರದಿಂದ ಮೂಲಮಠ ಸ್ಥಳಾಂತರಗೊಂಡು, ಮೂಲಮಠದ ಕುರುಹುಗಳು ಮಾತ್ರ ಇಂದು ಉಳಿದುಕೊಂಡಿದೆ. ಗೋಕರ್ಣ ಮಂಡಲಕ್ಕೆ ರಾಮಚಂದ್ರಾಪುರ ಮಠ ಮೂಲ’ ಎಂದರು.
ಬೆಳಗಾವಿ ಜಿಲ್ಲೆ ಸವದತ್ತಿಯ ಬ್ರಹ್ಮಾನಂದ ಆಶ್ರಮದ ಶಿವಾನಂದ ಸ್ವಾಮೀಜಿ ಇದ್ದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗೌರವಾಧ್ಯಕ್ಷ ದೇವಶ್ರವ ಶರ್ಮಾ, ಆಡಳಿತಾಧಿಕಾರಿ ಪ್ರಸನ್ನ ಕುಮಾರ್ ಟಿ.ಜಿ., ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ರಮಣ ಭಟ್ ಮುಂಬೈ ಪಾಲ್ಗೊಂಡಿದ್ದರು.